ಆಳಂದ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ, ಈ ಸರ್ಕಾರದ ಅಭಿವೃದ್ಧಿ ಕೇವಲ ಘೋಷಣೆ, ಭಾಷಣಗಳಿಗೆ ಸೀಮಿತವಾಗಿದೆ ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರ್ ಸದಸ್ಯೆ ಬೃಂದಾ ಕಾರಟ್ ಆಪಾದಿಸಿದರು.
ತಾಲ್ಲೂಕಿನ ವಿ.ಕೆ.ಸಲಗರ ಗ್ರಾಮದಲ್ಲಿ ಮಂಗಳವಾರ ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಸಿಪಿಐ(ಎಂ) ಪಕ್ಷದ ಅಭ್ಯರ್ಥಿ ಮಾರುತಿ ಮಾನ್ಪಡೆ ಪರ ಚುನಾವಣೆ ಪ್ರಚಾರದ ಸಭೆಯಲ್ಲಿ ಮಾತನಾಡಿದರು.
‘ರೈತರ ಸಾಲ ಮನ್ನಾ ಮಾಡುವ ಬದಲು ಕೇಂದ್ರ ಸರ್ಕಾರ ದೊಡ್ಡ ಉದ್ಯಮಿ, ಬಂಡವಾಳಶಾಹಿಗಳ ಭಾರಿ ಮೊತ್ತದ ಸಾಲ ಮನ್ನಾ ಮಾಡಿದ್ದಾರೆ. ಕೃಷಿ ದಿವಾಳಿ ಸ್ಥಿತಿ ತಲುಪಿದೆ, ರೈತರ ಆತ್ಮಹತ್ಯೆ, ಬೆಲೆ ಏರಿಕೆ ಹೆಚ್ಚುತ್ತಿದೆ, ಇದರಿಂದ ಜನಸಾಮನ್ಯರ ಬದುಕು ಸಂಕಟದ ಸುಳಿಗೆ ಸಿಲುಕಿದೆ’ ಎಂದರು.
ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರೂ ಉದ್ಯೋಗ ನೀಡಿಲ್ಲ. ಉದ್ಯೋಗ ಆಧಾರಿತ ಕೇಂದ್ರ ತೆರೆದಿಲ್ಲ, ಅಲ್ಲದೆ 60 ವರ್ಷ ಅಧಿಕಾರ ನಡೆಸಿ ಕಾಂಗ್ರೆಸ್ ಪಕ್ಷಕ್ಕೂ ಅಭಿವೃದ್ಧಿ ಬಗೆಗೆ ದೂರದೃಷ್ಟಿ, ಬದ್ದತೆ ಇಲ್ಲ ಎಂದು ಕಿಡಿಕಾರಿದರು.
ಸಿಪಿಐ(ಎಂ) ಅಭ್ಯರ್ಥಿ ಮಾರುತಿ ಮಾನ್ಪಡೆ, ಮುಖಂಡರಾದ ಸಿದ್ದಣಗೌಡ ಪಾಟೀಲ, ಮೌಲಾ ಮುಲ್ಲಾ, ಭೀಮಾಶಂಕರ ಮಾಡಿಯಾಳ, ಪ್ರಭುದೇವ ಯಳಸಂಗಿ, ಮೇಘರಾಜ ಕಠಾರೆ, ಸೂರ್ಯಕಾಂತ ಯಕಂಚಿ, ಶರಣಬಸಪ್ಪ ಮಮಶೇಟ್ಟಿ, ಮುಸ್ತಾನ ದಂಡೆ, ಚಿದಂಬರ ಬೆಳಮಗಿ, ಶಿವಶರಣಪ್ಪ ದಣ್ಣೂರು, ಬಾಬುರಾವ ಹಿರಮಶೇಟ್ಟಿ, ಶರಣಬಸಪ್ಪ ಹೆರೂರು, ರೇವಣಸಿದ್ದಪ್ಪ ಕಲಬುರ್ಗಿ ಇದ್ದರು.
ಕಮಲಾನಗರ, ಬೆಳಮಗಿ, ನರೋಣಾ ಮತ್ತಿತರ ಗ್ರಾಮದಲ್ಲಿ ಅಭ್ಯರ್ಥಿ ಮಾರುತಿ ಮಾನ್ಪಡೆ ಪರ ಮತಯಾಚನೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.