ಚಿತ್ತಾಪುರ: ರಾಜ್ಯ ಸರ್ಕಾರದಿಂದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಮಾಡುವುದಕ್ಕೆ ವಿರೋಧ ಮಾಡುತ್ತಿರುವ ಬಿಜೆಪಿ ನೀತಿ ಖಂಡಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಯುವ ಅಧ್ಯಕ್ಷ ಶೇಖ್ ಬಬ್ಲು ನೇತೃತ್ವದಲ್ಲಿ ಕಾರ್ಯಕರ್ತರು ಶನಿವಾರ ಪಟ್ಟಣದ ಲಾಡ್ಜಿಂಗ್ ಕ್ರಾಸ್ನಲ್ಲಿ ಪ್ರತಿಭಟನೆ ಮಾಡಿದರು.
‘ಬಿಜೆಪಿಯ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಈಶ್ವರಪ್ಪ, ಆರ್.ಅಶೋಕ, ಶೋಭಾ ಕರಂದ್ಲಾಜೆ ಅವರು ಈ ಹಿಂದೆ ಟಿಪ್ಪು ಸುಲ್ತಾನ್ ಕುರಿತು ಹಾಡಿ ಹೊಗಳಿದ್ದರು. ಈಗ ಅವರ ಜಯಂತಿಗೆ ತೀವ್ರ ವಿರೋಧ ವ್ಯಕ್ತ ಮಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತ ಮಾಡಿದರು.
‘ಟಿಪ್ಪು ಒಬ್ಬ ರಾಜನಾಗಿ ಅನೇಕ ಜನಪರ ಕೆಲಸ ಮಾಡಿದ್ದಾನೆ. ಬ್ರಿಟಿಷರ ವಿರುದ್ಧ ಹೋರಾಡಿದ್ದಾನೆ. ತನ್ನ ಮಗನನ್ನು ಒತ್ತೆ ಇಟ್ಟು ರಾಜ್ಯದ ಹಿತ, ದೇಶದ ಹಿತ ಕಾಪಾಡಿರುವ ಉದಾಹರಣೆ ಟಿಪ್ಪು ಬಿಟ್ಟರೆ ಇತಿಹಾಸದಲ್ಲಿ ಯಾರೂ ಸಿಗಲಾರರು. ಅದನ್ನು ಮರೆ ಮಾಚಿ ಹಿಂದೂ ಮುಸ್ಲಿಂ ಬೇಧ ಹುಟ್ಟಿಸಿ ಸಮಾಜದ ಏಕತೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ’ ಎಂದು ಪ್ರತಿಭಟನೆಕಾರರು ಆರೋಪಿಸಿದರು.
‘ಟಿಪ್ಪು ಜಯಂತಿ ಆಚರಣೆ ವಿಷಯದಲ್ಲಿ ಇಲ್ಲ ಸಲ್ಲದ ಆರೋಪ ಮಾಡಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಬಿಜೆಪಿಯಿಂದಲೇ ರಾಷ್ಟ್ರಪತಿ ಆಗಿರುವ ರಾಮನಾಥ ಕೋವಿಂದ ಅವರು ಟಿಪ್ಪುವಿನ ಕುರಿತು ಅರ್ಥಪೂರ್ಣವಾಗಿ ಮಾತನಾಡಿದ್ದಾರೆ. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಶೇಖ್ ಬಬ್ಲು, ಈರಪ್ಪ ಭೋವಿ, ಬಾಬು ಕಾಶಿ, ಶಿವಾಜಿ ಕಾಶಿ, ಬಸವರಾಜ ಚಿನ್ನಮಳ್ಳಿ, ಶಂಕರ ಚವಾಣ್, ಶೇಖ್ ಶಮ್ಶೇರ್ ವಾಡಿ, ವಸೀಮ್ ಖಾನ್, ಶರಣು ಎಂ.ಡೋಣಗಾಂವ, ಅನಿಲ್ ಸ್ವಾಮಿ, ಚನ್ನವೀರ, ಚಂದ್ರಶೇಖರ ವಾಡಿ, ಲಾಲ ಪಟೇಲ್ ವಾಡಿ, ಸಾಬಣ್ಣ ನಾಲವಾರ, ಸಂತೋಷ ಪೂಜಾರಿ, ನಜೀರ್ ಆಡಕಿ, ಶಿವಯೋಗಿ ರಾವೂರ, ಯುನುಸ್ ರಾವೂರ, ಜಹೀರ ಪಗಡಿ, ಜೆ.ಡಿ.ವಿನೋದಕುಮಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.