ADVERTISEMENT

ತತ್ವ, ಸಿದ್ಧಾಂತ ಮರೆತ ಪಕ್ಷ ಬಿಜೆಪಿ

ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಆರೋಪ‍

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 11:31 IST
Last Updated 26 ಏಪ್ರಿಲ್ 2018, 11:31 IST
ಆಳಂದ ಪಟ್ಟಣದ ಮುಖಂಡ ವಿಠ್ಠಲರಾವ ಪಾಟೀಲ ನಿವಾಸದಲ್ಲಿ ಬಿಜೆಪಿ ಮುಖಂಡ ಚಂದ್ರಶೇಖರ ಹಿರೇಮಠ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು
ಆಳಂದ ಪಟ್ಟಣದ ಮುಖಂಡ ವಿಠ್ಠಲರಾವ ಪಾಟೀಲ ನಿವಾಸದಲ್ಲಿ ಬಿಜೆಪಿ ಮುಖಂಡ ಚಂದ್ರಶೇಖರ ಹಿರೇಮಠ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು   

ಆಳಂದ: ‘ಬಿಜೆಪಿ ಹಣಬಲವುಳ್ಳ ಹಾಗೂ ಮದ್ಯ ದಂಧೆಯವರಿಗೆ ಟಿಕೆಟ್‌ ನೀಡುವ ಮೂಲಕ ತನ್ನ ತತ್ವ, ಸಿದ್ಧಾಂತ ವನ್ನು ಮರೆತಿದೆ. ಆಳಂದ ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವು ದಿಲ್ಲ’ ಎಂದು ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಹೇಳಿದರು.

ಬುಧವಾರ ಇಲ್ಲಿನ ಕಾಂಗ್ರೆಸ್‌ ಮುಖಂಡ ವಿಠ್ಠಲರಾವ ಪಾಟೀಲ ಅವರ ನಿವಾಸದಲ್ಲಿ ಬಿಜೆಪಿ ತೊರೆದು ತಮ್ಮ ನೂರಾರು ಸಂಖ್ಯೆಯ ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ನಂತರ ಅವರು ಮಾತನಾಡಿದರು.

‘ಆಳಂದದಲ್ಲಿ 450 ಮದ್ಯದ ಅಂಗಡಿಗಳಿವೆ. ಮದ್ಯದ ಅಕ್ರಮ ಮಾರಾಟ ಮಾಡಲಾಗುತ್ತಿದೆ. ಕಳೆದ 3 ವರ್ಷದಿಂದ ಇದರ ವಿರುದ್ಧ ಹೋರಾಟ ಮಾಡಲಾಗಿದೆ. ಮದ್ಯಮುಕ್ತ ಆಳಂದ ತಾಲ್ಲೂಕು ನಿರ್ಮಾಣಕ್ಕಾಗಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಆರ್.ಪಾಟೀಲ ಅವರನ್ನು ಬೆಂಬಲಿಸಲು ಷರತ್ತು ಇಲ್ಲದೆ ಸೇರ್ಪಡೆಯಾಗುತ್ತಿದ್ದೇನೆ’ ಎಂದರು.

ADVERTISEMENT

‘ಶಾಸಕರಾಗಿ ಪಾಟೀಲ ಅವರು ಅಭಿವೃದ್ಧಿಪರ ಕಾಳಜಿ ಮತ್ತು ದೂರದೃಷ್ಟಿ ಇದೆ. ಕಳೆದ 5 ವರ್ಷದಲ್ಲಿ ಕ್ಷೇತ್ರದಲ್ಲಿ ಗಮನಾರ್ಹ ಕೆಲಸಗಳು ನಡೆದಿವೆ. ಮುಂಬರುವ ದಿನಗಳಲ್ಲಿ ಅಭಿವೃದ್ಧಿ ವೇಗ ಹೆಚ್ಚಲು ಹಾಗೂ ಶಾಂತಿ, ಸಹಬಾಳ್ವೆಯ ಸಮಾಜಕ್ಕಾಗಿ ಕಾಂಗ್ರೆಸ್‌ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕಿದೆ’ ಎಂದು ಹೇಳಿದರು.

ಬಿ.ಆರ್.ಪಾಟೀಲ ಮಾತನಾಡಿ ‘ಹೋರಾಟಗಾರ, ಜನಪರ ಕಾಳಿಜಿಯುಳ್ಳ ಚಂದ್ರಶೇಖರ ಹಿರೇಮಠ ಅವರು ಕಾಂಗ್ರೆಸ್ ಸೇರ್ಪಡೆಯಾದ ನಂತರ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ’ ಎಂದರು.

ಮುಖಂಡರಾದ ವಿಠ್ಠಲರಾವ ಪಾಟೀಲ, ಸಲಾಂ ಸಗರಿ, ಖಲೀಲ್ ಅನ್ಸಾರಿ, ಗುರುಶರಣ ಪಾಟೀಲ, ದಿಲೀಪ ಕ್ಷಿರಸಾಗರ ಮಾತನಾಡಿದರು. ಚಂದ್ರಶೇಖರ ಹಿರೇಮಠ ಅವರೊಂದಿಗೆ ಲಕ್ಷ್ಮಣ ಸೂಗೂರು, ಕಿಸನ ರಂಗದಾಳ, ಸಾದಿಕ ಅನ್ಸಾರಿ, ಶರಣಬಸಪ್ಪ ದುದಗಿ, ಅಬ್ಬಾಸಲಿ ಜರ್ದಿ, ರಫಿಕ್ ಇನಾಂದಾರ, ಬಾಷಾ ಜಮಾದಾರ, ಪಂಡಿತ ಮಾದನ ಹಿಪ್ಪರಗಾ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವೀರೇಂದ್ರ ಜವಳಿ, ಗುರಣ್ಣಾ ಬೆಳ್ಳೆ, ಚಂದ್ರಕಾಂತ ಜಮದಾರ, ರವಿ ಮುಲಗೆ, ರವೀಂದ್ರ ಬಾಳಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಕದೂಮ್ ಅನ್ಸಾರಿ, ರವೀಂದ್ರ ಕೊರಳ್ಳಿ, ಸೈಪಾನ ಜವಳಿ, ಅಜಗರಲಿ ಹವಾಲ್ದಾರ್, ಶರಣಗೌಡ ಪಾಟೀಲ, ಶಿವರಾಜ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.