ADVERTISEMENT

ನೀರು ತುಂಬುವ ಯೋಜನೆ: ಅಡಿಗಲ್ಲು ಇಂದು

ಅಫಜಲಪುರ, ಆಳಂದ ತಾಲ್ಲೂಕಿಗೆ ಪ್ರಯೋಜನ; ಶಾಸಕ ಮಾಲೀಕಯ್ಯ ಗುತ್ತೇದಾರ ಭಾಗಿ

ಶಿವಾನಂದ ಹಸರಗುಂಡಗಿ
Published 24 ಮಾರ್ಚ್ 2018, 6:20 IST
Last Updated 24 ಮಾರ್ಚ್ 2018, 6:20 IST
ಅಫಜಲಪುರ ತಾಲ್ಲೂಕಿನ ಭೀಮಾ ಸಮೀಪದ ಭೀಮಾ ಜಲಾಶಯದಲ್ಲಿ ನೀರು ಸಂಗ್ರಹವಾಗಿರುವುದು
ಅಫಜಲಪುರ ತಾಲ್ಲೂಕಿನ ಭೀಮಾ ಸಮೀಪದ ಭೀಮಾ ಜಲಾಶಯದಲ್ಲಿ ನೀರು ಸಂಗ್ರಹವಾಗಿರುವುದು   

ಅಫಜಲಪುರ: ತಾಲ್ಲೂಕಿನ ಸೊನ್ನ ಗ್ರಾಮದ ಬಳಿ ಭೀಮಾ ನದಿಯ ಬ್ಯಾರೇಜ್‌ ಕಂ ಬ್ರೀಜ್‌ದಿಂದ ತಾಲ್ಲೂಕಿನ 10 ಕೆರೆಗಳಿಗೆ ಮತ್ತು ಆಳಂದ ತಾಲ್ಲೂಕಿನ ಮೂರು ಕೆರೆಗಳಿಗೆ ಹಾಗೂ ಅಮರ್ಜಾ ಜಲಾಶಯಕ್ಕೆ ನೀರು ತುಂಬುವ ಯೋಜನೆಗೆ ಮಾ.24ರ ಶನಿವಾರ ಶಾಸಕ ಶಂಕುಸ್ಥಾಪನೆ ನೆರವೇರಿಸುವರು.

ಸೊನ್ನ ಭೀಮಾ ಏತ ನೀರಾವರಿಯಿಂದ ಈಗಾಗಲೇ ಬಳುಂಡಗಿ ಮತ್ತು ಅಳ್ಳಗಿ(ಬಿ) ಕಾಲುವೆಗಳಿಂದ ಜಮೀನಿಗೆ ನೀರು ಹರಿಸಲಾಗಿದೆ. ಮಳೆಗಾಲದಲ್ಲಿ ಮತ್ತು ಭೀಮಾ ಪ್ರವಾಹ ಬಂದಾಗ ಹೆಚ್ಚು ನೀರನ್ನು ಮುಂದೆ ಹರಿದು ಹೋಗದಂತೆ ತಡೆಗಟ್ಟಿ ಅದೇ ನೀರನ್ನು ತಾಲ್ಲೂಕಿನ ಬಳೂರ್ಗಿ, ಬಡದಾಳ, ರೇವೂರ, ಅರ್ಜುಣಗಿ ಹೀಗೆ 10 ಕೆರೆಗಳಿಗೆ ನೀರು ತುಂಬುವದು ಮತ್ತು ಆಳಂದ ತಾಲ್ಲೂಕಿನ ಅಮರ್ಜಾ ಜಲಾಶಯಕ್ಕೆ ನೀರು ತುಂಬುವ ಯೋಜನೆ ಇದು .

‘ಈಗಾಗಲೇ ಸರ್ಕಾರದಿಂದ ಅನುಮೋದನೆ ಪಡೆದಿದ್ದು, ಸುಮಾರು ₹ 300 ಕೋಟಿ ಯೋಜನೆ ಇದಾಗಿದೆ. 2 ವರ್ಷದಲ್ಲಿ ಮುಗಿಯಬಹುದು’ ಎಂದು ಸೊನ್ನ ಭೀಮಾ ಏತ ನೀರಾವರಿ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಕೆ.ಎಸ್‌.ಹಿರೇಮಠ ತಿಳಿಸಿದರು.

ADVERTISEMENT

‘ಭೀಮಾ ಬ್ಯಾರೇಜ್‌ 3.16 ಟಿಎಂಸಿ ಸಾಮರ್ಥ್ಯವಿದ್ದು, ಸರ್ಕಾರದಿಂದ ಕೆರೆ ತುಂಬುವ ಯೋಜನೆಗೆ ಮಂಜೂರಾತಿ ನೀಡುತ್ತಿದ್ದೇವೆ. ಇದರಿಂದ ಭೀಮಾ ಏತ ನೀರಾವರಿ ವಂಚಿತ ಗ್ರಾಮಗಳಿಗೆ ಅನುಕೂಲವಾಗಲಿದೆ.

ಯೋಜನೆ ಆರಂಭವಾದಾಗ ರೈತರು ಸಹಕಾರ ನೀಡಬೇಕು’ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು.

ಅಂತರ್ಜಲ ಮಟ್ಟ ಹೆಚ್ಚಳ:  ‘ಭೀಮಾ ಏತ ನೀರಾವರಿ ಯಿಂದ ವಂಚಿತವಾಗಿರುವ ಗ್ರಾಮಗಳಿಗೆ ಕೆರೆಗಳಿಗೆ ನೀರು ತುಂಬುವ ಯೋಜನೆ ಯಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ.

ಇದರಿಂದ ಅಂತರ್ಜಲ ಮಟ್ಟ ಏರಿಕೆಯಾಗಲಿದ್ದು, ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸಿಗಲಿದ್ದು, ಮತ್ತು ಕೃಷಿಗೆ ಅನುಕೂಲವಾಗಲಿದೆ’ ಎಂದು ಬಳೂರ್ಗಿ ಗ್ರಾಮದ ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಅರವಿಂದ ಎಸ್‌ ದೊಡ್ಡಮನಿ, ಟಿಎಪಿಸಿಎಂ ಮಾಜಿ ಅಧ್ಯಕ್ಷ ಹನುಮಯ್ಯ ಗುತ್ತೇದಾರ, ಎಪಿಎಂಸಿ ನಿರ್ದೇಶಕ ಫಲಾಲಸಿಂಗ್‌ ರಾಠೋಡ ಹೇಳುತ್ತಾರೆ.
**
ಭೀಮಾ ಜಲಾಶಯದಿಂದ ತಾಲ್ಲೂಕಿನ 10 ಕೆರೆ ಹಾಗೂ ಆಳಂದ ತಾಲ್ಲೂಕಿನ ಅಮರ್ಜಾಗೆ ನೀರು ತುಂಬುವ ಯೋಜನೆ ಅನುಮೋದನೆ ಪಡೆದಿದ್ದು, ಈ ಭಾಗದವರಿಗೆ ಅನುಕೂಲವಾಗಲಿದೆ
 – ಮಾಲೀಕಯ್ಯ ಗುತ್ತೇದಾರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.