ADVERTISEMENT

ಪರಧರ್ಮ ಸಹಿಷ್ಣುತೆ ಗುಣ ಬೆಳೆಯಲಿ: ಶಾಸಕ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 6:57 IST
Last Updated 11 ನವೆಂಬರ್ 2017, 6:57 IST
ಆಳಂದ ಪಟ್ಟಣದ ಗುರುಭವನದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡ ಟಿಪ್ಪುಸುಲ್ತಾನ್‌ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು
ಆಳಂದ ಪಟ್ಟಣದ ಗುರುಭವನದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡ ಟಿಪ್ಪುಸುಲ್ತಾನ್‌ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು   

ಆಳಂದ: ‘ನಮ್ಮ ದೇಶವು ವೈವಿಧ್ಯ ಮಯ ಆಚರಣೆ, ಧರ್ಮ, ಜಾತಿ ಹಾಗೂ ಸಂಸ್ಕೃತಿಯಿಂದ ಕೂಡಿದೆ. ರಾಷ್ಟ್ರೀಯ ಏಕತೆಗಾಗಿ ಪ್ರತಿಯೊಬ್ಬರೂ ಪರಧರ್ಮ ಸಹಿಷ್ಣುತೆಯ ಗುಣ ಬೆಳೆಸಿಕೊಳ್ಳಬೇಕು’ ಎಂದು ಶಾಸಕ ಬಿ.ಆರ್.ಪಾಟೀಲ ಹೇಳಿದರು. ಪಟ್ಟಣದ ಗುರುಭವನದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಟಿಪ್ಪುಸುಲ್ತಾನ್‌ ಜಯಂತ್ಯುತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದರು.

‘ಧರ್ಮ ಮತ್ತು ದೇಶ ಬೇರೆ ಬೇರೆಯಾಗಿವೆ. ನಾವು ಸಂವಿಧಾ ನಿಕವಾಗಿ ಸಾಮಾಜಿಕ ನ್ಯಾಯ, ಸಮಾನತೆ ಒಪ್ಪಿಕೊಂಡಿರುವ ಕಾರಣ ಎಲ್ಲ ಧರ್ಮ, ಜಾತಿ, ಮತಪಂಥಗಳ ಜೀವನಶೈಲಿ ಗೌರವಿಸಬೇಕು. ಟಿಪ್ಪುಸುಲ್ತಾನ ಕನ್ನಡಿಗ ದೊರೆ, ಬ್ರಿಟಿಷ್‌ರೊಂದಿಗೆ ರಾಜಿ ಮಾಡಿಕೊಳ್ಳದೆ ಹೋರಾಡಿದ ವೀರ’ ಎಂದು ಬಣ್ಣಿಸಿದರು.

ಉಪನ್ಯಾಸಕ ರಮೇಶ ಮಾಡಿ ಯಾಳಕರ ಮಾತನಾಡಿ, ‘ಬ್ರಿಟಿಷ್‌ ಆಡಳಿತ ವಿಸ್ತಾರಕ್ಕೆ ಟಿಪ್ಪುಸುಲ್ತಾನ್‌ ದಕ್ಷಿಣ ಭಾರತದಲ್ಲಿ ದೊಡ್ಡ ತಡೆ ಗೋಡೆಯಾಗಿದ್ದರು. ಆದರೆ, ಅಂದಿನ ಇತರೆ ರಾಜರು ಟಿಪ್ಪುವಿಗೆ ಸಹಕಾರ ನೀಡಿದ್ದರೆ ಬ್ರಿಟಿಷ್‌ರನ್ನು ದೇಶದಿಂದ ಹೊರ ಹಾಕುವ ಶಕ್ತಿ ಟಿಪ್ಪುವಿಗೆ ಇತ್ತು’ ಎಂದರು.

ADVERTISEMENT

ತಹಶೀಲ್ದಾರ್ ಬಸವರಾಜ ಬೆಣ್ಣೆ ಶಿರೂರು, ಸಮಾಜದ ಮುಖಂಡ ಸಲಾಂ ಸಗರಿ ಮಾತನಾಡಿ, ‘ಟಿಪ್ಪು ಸುಲ್ತಾನ್‌ ಯುದ್ಧ ಕ್ಷಿಪಣಿ, ರೇಷ್ಮೆ ಬೆಳೆ, ಕೆರೆ, ದೇವಸ್ಥಾನ ಅಭಿವೃದ್ಧಿಗೆ ಶ್ರಮಿಸಿದ ರಾಜ’ ಎಂದರು.

ಪುರಸಭೆ ಉಪಾಧ್ಯಕ್ಷ ಅಜಗರಲಿ ಹವಾಲ್ದಾರ್, ಎಪಿಎಂಸಿ ಅಧ್ಯಕ್ಷ ಶರಣ ಬಸಪ್ಪ ಭೂಸನೂರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ  ಡಾ.ಸಂಜಯ ರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ, ಬಿಇಒ ಮಜರ್ ಹುಸೇನ್, ಪುರಸಭೆ ಸದಸ್ಯರಾದ ಮಲ್ಲಪ್ಪ ಹತ್ತರಕಿ, ಸುನೀಲ ಹಿರೋಳ್ಳಿಕರ, ಗುರುನಾಥ ಕಳಸೆ, ಅಣ್ಣಪ್ಪ ದಂಡಗೂಲೆ, ವಯೀದ್ ಜರ್ಧಿ, ಸೈಪಾನ ಜವಳಿ, ಮುಖಂಡರಾದ ಅಹ್ಮದಲಿ ಚುಲಬುಲ, ರೇವಣ್ಣಪ್ಪ ನಾಗೂರೆ, ಬಸವರಾಜ ಕೊರಳ್ಳಿ, ಶ್ರೀಮಂತರಾವ ಪಾಟೀಲ, ಪಂಡಿತ ಧೂಳೆ, ಸೂರ್ಯಕಾಂತ ತಟ್ಟೆ, ಮೋಹಿಜ್ ಕಾರಬಾರಿ, ಯೂಸುಫ್ ಅನ್ಸಾರಿ ಇದ್ದರು.

ಗುರುಭವನದ ಸುತ್ತ ಡಿವೈಎಸ್‌ಪಿ ಪಿ.ಕೆ.ಚೌಧುರಿ, ಸಿಪಿಐ ಎಚ್.ಬಿ.ಹೊಸ ಮನಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸರ್ಕಾರಿ ಕನ್ಯಾ ಪ್ರೌಢ ಶಾಲೆಯ ವಿದ್ಯಾರ್ಥಿ ನಿಯರು ಸಂಗೀತ ಶಿಕ್ಷಕ ಶಂಕರ ಹೂಗಾರ ನೇತೃತ್ವದಲ್ಲಿ ನಾಡಗೀತೆ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.