ADVERTISEMENT

ಪ್ರಿಯಾಂಕ್‌ ಖರ್ಗೆ ವಿರುದ್ಧ ಕ್ರಮಕ್ಕೆ ಆಗ್ರಹ

ಹೂಡಿಕೆ ವಲಯ ಹೇಳಿಕೆ ನೀತಿ ಸಂಹಿತೆ ಉಲ್ಲಂಘನೆ: ವಾಲ್ಮೀಕ ನಾಯಕ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 10:27 IST
Last Updated 22 ಮಾರ್ಚ್ 2014, 10:27 IST

ವಾಡಿ: ‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೂ ಚಿತ್ತಾಪುರದಲ್ಲಿ ಭಾರಿ ಪ್ರಮಾಣದ ರಾಷ್ಟ್ರೀಯ ಬಂಡವಾಳ ಉತ್ಪಾ­ದನಾ ಹೂಡಿಕೆ ವಲಯ ಸ್ಥಾಪನೆಯಾಗಲಿದೆ. ಇದರಿಂದ ಸುಮಾರು 10 ಸಾವಿರ ಜನರಿಗೆ ಉದ್ಯೋ­ಗ ದೊರಕಲಿದೆ ಎಂದು ಹೇಳಿಕೆ ನೀಡಿ ಚಿತ್ತಾ­ಪುರ ಶಾಸಕ ಪ್ರಿಯಾಂಕ್‌ ಖರ್ಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ’ ಎಂದು ಮಾಜಿ ಶಾಸಕ ವಾಲ್ಮೀಕ ನಾಯಕ ಆರೋಪಿಸಿದ್ದಾರೆ.

‘ಚಿತ್ತಾಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಮಾನ ನಿಲ್ದಾಣ ನಿರ್ಮಾಣವಾಗುವ ಸ್ಥಳದಲ್ಲಿ ಸುಮಾರು ಮೂರು ಸಾವಿರ ಎಕರೆ ಪ್ರದೇಶದಲ್ಲಿ ಈ ಹೂಡಿಕೆ ವಲಯ ಸ್ಥಾಪನೆಯಾಗಲಿದೆ. ಪರಿಣಾಮ ದೂರ ಸಂಪರ್ಕ, ಸಾರಿಗೆ ಸಂಪರ್ಕ, ರೈಲ್ವೆ ಅಭಿ­ವೃದ್ಧಿಯಾಗಿ, ಈ ಭಾಗದಲ್ಲಿ ಬೇಳೆ ಕಾಳು, ಸಿಮೆಂಟ್‌ ಉದ್ಯಮಕ್ಕೆ ಅನುಕೂಲವಾಗಲಿದೆ ಎಂದು ಹೇಳುತ್ತಿ­ರುವುದು ಮತದಾರರನ್ನು ಸೆಳೆಯುವ ಚುನಾವಣಾ ತಂತ್ರವಾಗಿದೆ’ ಎಂದು ಬುಧವಾರ ಬಿಜೆಪಿ ಪಕ್ಷದ ಕಚೇರಿ­ಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಪ್ರಿಯಾಂಕ್‌ ವಿರುದ್ಧ ಕಿಡಿ ಕಾರಿದರು.

‘ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್‌ ವಿವಿಧ ಸ್ಥಾನ ಅನುಭವಿ­ಸಿದ್ದಾರೆ. ಆದರೂ ಈ ಭಾಗ­ದಲ್ಲಿ ಯಾವುದೇ ಹೂಡಿಕೆ ವಲಯ ಬಂದಿರಲಿಲ್ಲ. ಮತ್ತು ಯಾರಿಗೂ ಉದ್ಯೋಗ ದೊರಕಲಿಲ್ಲ. ಆದರೆ ಈಗ ಹೂಡಿಕೆ ವಲಯ ಸ್ಥಾಪನೆ ಮಾಡಿ, ಹತ್ತು ಸಾವಿರ ಜನರಿಗೆ ಉದ್ಯೋಗ ನೀಡುತ್ತೇವೆ ಎಂದು ಹೇಳುತ್ತಿರುವುದು ಮತದಾರರಿಗೆ ಚೆಳ್ಳೆ ಹಣ್ಣು ತಿನ್ನಿಸುವ ಕೆಲಸ . ನೀತಿ ಸಂಹಿತೆ ಉಲ್ಲಂಘಿಸಿ ಇಂಥ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿ­ದ್ದಾರೆ.

‘ಚಿತ­್ತಾಪು­ರ­ದಲ್ಲಿ ರಾಷ್ಟ್ರೀಯ ಬಂಡವಾಳ ಉತ್ಪಾ­ದನಾ ಹೂಡಿಕೆ ವಲಯ ಮಂಜೂರಾತಿ ಪತ್ರ ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯದಿಂದ ಬಂದಿದೆ ಎಂದು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿಯನ್ನು ವಜಾ ಮಾಡಬೇಕು’ ಎಂದೂ ವಾಲ್ಮೀಕ ಆಗ್ರಹಿಸಿದ್ದಾರೆ.

’ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸುರ್ವಣ ಗ್ರಾಮ ಯೋಜನೆಯಡಿ ಸುಮಾರು ₨ 4.82ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಅಭಿವೃದ್ಧಿ ಸಲುವಾಗಿ ಚಿತ್ತಾಪುರ ಮತಕ್ಷೇತ್ರದ 12ಗ್ರಾಮಗಳಲ್ಲಿ ಯೋಜ­ನೆಗೆ ಚಾಲನೆ ನೀಡಲಾಗಿತ್ತು. ಆದರೆ ಇಲ್ಲಿಯವರೆಗೆ ಅವು ಅನುಷ್ಠಾನಗೊಂಡಿಲ್ಲ. ಅದಕ್ಕೆ ಪ್ರಿಯಾಂಕ್‌ ಹೊಣೆ’ ಎಂದು ವಾಲ್ಮೀಕ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪುರಸಭೆ ವಿರೋಧ ಪಕ್ಷದ ನಾಯಕ ಅಶೋಕ ಬಾಜಿರಾವ, ಸ್ಥಳೀಯ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಹರಿ ಗಲಾಂಡೆ, ಅಶೋಕ ಸೂರ್ಯವಂಶಿ, ರಾಜೇಶ ಕಾಂಬಳೆ, ಮಲ್ಲೇಶಿ ಬಂಡಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.