ADVERTISEMENT

ಮೊದಲ ದಿನ ಸಂಭ್ರಮದಿಂದ ಕಳೆದ ಮಕ್ಕಳು

ಶಾಲಾ ಆರಂಭೋತ್ಸವ; ಮಕ್ಕಳ ಶಿಕ್ಷಣಕ್ಕೆ ಕಾಳಜಿ ವಹಿಸಲು ಖಜೂರಿ ಶ್ರೀ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಮೇ 2018, 8:42 IST
Last Updated 29 ಮೇ 2018, 8:42 IST
ಆಳಂದ ತಾಲ್ಲೂಕಿನ ಖಜೂರಿ ನಿಜಾಚರಣೆ ಶಾಲೆಯಲ್ಲಿ ಮಕ್ಕಳ ಶಾಲಾ ಆರಂಭೋತ್ಸವವು ಜರುಗಿತು
ಆಳಂದ ತಾಲ್ಲೂಕಿನ ಖಜೂರಿ ನಿಜಾಚರಣೆ ಶಾಲೆಯಲ್ಲಿ ಮಕ್ಕಳ ಶಾಲಾ ಆರಂಭೋತ್ಸವವು ಜರುಗಿತು   

ಆಳಂದ: ‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಾಲೆಗಳು ಹಿಂದೆ ಬೀಳುತ್ತಿವೆ. ಕಲಿಕಾ ವಾತಾವರಣ ಸರಿಯಾಗಿಲ್ಲ. ಶಿಕ್ಷಕರು, ಪಾಲಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರ ಶಿಕ್ಷಣಕ್ಕೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಖಜೂರಿಯ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಸಲಹೆ ನೀಡಿದರು.

ತಾಲ್ಲೂಕಿನ ಖಜೂರಿಯ ನಿಜಾಚರಣೆ ಕನ್ನಡ ಶಾಲೆಯಲ್ಲಿ ಸೋಮವಾರ ಶಾಲಾ ಆರಂಭೋತ್ಸವದ ನಿಮಿತ್ತ ಶಿಕ್ಷಣದ ಮಹತ್ವ ಸಾರುವ ಪ್ರಭಾತಫೇರಿ ನಡೆಸಿ ಮಾತನಾಡಿದರು‌. ‘ವಿದ್ಯಾರ್ಥಿಗಳು ಸರ್ಕಾರದ ಸವಲತ್ತುಗಳ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಚರಮೂರ್ತಿ ನೀಲಲೋಚನಾ ತಾಯಿ, ಮುಖ್ಯಗುರು ಸುಭಾಷ ಹರಳಯ್ಯ, ಕುಮಾರ ಬಂಡೆ, ಶರಣಬಸಪ್ಪ ಶಿವಮೂರ್ತಿ, ಜ್ಯೋತಿ ಕಟಕೆ, ವಿಜಯ ಪೂಜಾರಿ, ಲಲಿತಾ ನಡಗೇರಿ, ರಾಜಶೇಖರ ಕಲಶೆಟ್ಟಿ ಇದ್ದರು.

ADVERTISEMENT

ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ: ಪಟ್ಟಣದ ಜಯಪ್ರಕಾಶ ನಾರಾಯಣ ಪ್ರೌಢಶಾಲೆಯಲ್ಲಿ ಸೋಮವಾರ ಶಾಲಾ ಆರಂಭೋತ್ಸವ ನಡೆಯಿತು. ಶಾಲೆಯಲ್ಲಿ ತರಗತಿ ಕೋಣೆ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಯಿತು. ಕೊಠಡಿಗಳನ್ನು ತಳಿರು ತೋರಣ ಕಟ್ಟಿ ಸಿಂಗರಿಸಲಾಯಿತು. ನಂತರ ಶಾಲೆಗೆ ಮೊದಲ ದಿನ ಆಗಮಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಸಿಹಿ ಹಂಚಿ ಸ್ವಾಗತ ಕೋರಿದರು.

ಮುಖ್ಯಶಿಕ್ಷಕ ಎಲ್.ಎಸ್.ಬೀದಿ, ಅಕ್ಕ ಮಹಾದೇವಿ ಕನ್ಯಾ ಪ್ರೌಢಶಾಲೆ ಮುಖ್ಯಶಿಕ್ಷಕ ಶಿವಪುತ್ರ ಅಲ್ದಿ, ಬಸವರಾಜ ಚೌಧುರಿ, ರಾಜಕುಮಾರ ಪವಾರ, ಸತೀಶ ಕೊಗನೂರೆ, ರಾಜಕುಮಾರ ಚಲುವಾದಿ, ಡಿ.ಎಂ.ಪಾಟೀಲ, ಅಪ್ಪಾಸಾಹೇಬ ತೀರ್ಥೆ, ಶ್ರೀಶೈಲ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.