ಕಲಬುರ್ಗಿ: ‘ಬೆಳೆಗಳಿಗೆ ವಿಷಕಾರಿ ರಾಸಾಯನಿಕ ಗೊಬ್ಬರ ಉಪಯೋಗಿಸುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ರೈತರು ಎರೆಹುಳು, ಜೈವಿಕ ಗೊಬ್ಬರ ಉಪಯೋಗಿಸಬೇಕು’ ಎಂದು ಹಿರೇಮಠದ ರಾಜೇಶ್ವರ ಶಿವಾಚಾರ್ಯರು ಹೇಳಿದರು.
ಇಲ್ಲಿಯ ಭವಾನಿ ನಗರದ ಚನ್ನವೀರ ಮಹಾಶಿವಯೋಗಿಗಳ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ‘ಮುಂಗಾರು ಕೃಷಿ ಹಬ್ಬ’ ಸಿರಿದಾನ್ಯ, ಸಸಿ ವಿತರಣೆ, ಗುರುವಂದನೆ, ಶ್ರೀಮಠದ ಗುರುಪಾದಲಿಂಗ ಮಹಾಶಿವಯೋಗಿಗಳಿಗೆ ತುಲಾಭಾರ ಹಾಗೂ ರೈತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ರೈತರನ್ನು ಬರೀ ಹೊಗಳಿದರೆ ಸಾಲದು, ಸರ್ಕಾರ ಅವರಿಗೆ ಸೌಲಭ್ಯ ಕಲ್ಪಿಸಬೇಕು. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯಬೇಕು. ಅಲ್ಪ ಜಮೀನಿನಲ್ಲಿ ಅಪಾರ ಸಾಧನೆ ಮಾಡಿದ ರೈತರನ್ನು ಸರ್ಕಾರ ಗುರುತಿಸಬೇಕು’ ಎಂದರು.
‘ಗುರುಪಾದಲಿಂಗ ಮಹಾಶಿವಯೋಗಿಗಳು ಕೃಷಿಯಲ್ಲಿ ಮಾಡಿದ ಸಾಧನೆ ಅಪಾರವಾಗಿದ್ದು, ಪ್ರತಿಯೊಬ್ಬ ಸ್ವಾಮೀಜಿಯವರು ಕೃಷಿಯಲ್ಲಿ ತೊಡಗಬೇಕು’ ಎಂದು ಹೇಳಿದರು.
ಚಿಂಚನಸೂರನ ಸಿದ್ಧಮಲ್ಲ ಶಿವಾಚಾರ್ಯರು, ರಾಜಶೇಖರ ಶಿವಾಚಾರ್ಯರು, ಗುರುಲಿಂಗ ಶಿವಾಚಾರ್ಯರು, ಆಂದೋಲಾದ ಸಿದ್ದಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಮಾತನಾಡಿದರು.
ಸಂಸದ ಬಸವರಾಜ ಪಾಟೀಲ ಸೇಡಂ, ಡಾ.ಎಸ್.ಎ. ಪಾಟೀಲ, ಜಯಪ್ರಕಾಶ ಆರ್.ಪಾಟೀಲ, ಡಾ.ರಾಜು ತೆಗ್ಗಳಿ, ಸಮದ್ ಪಟೇಲ್, ಶಶೀಲ್ ನಮೋಶಿ, ಬಸವರಾಜ ಮತ್ತಿಮೂಡ, ಶರಣು ಸಲಗರ, ಶಿವಾನಂದ ಪಾಟೀಲ, ಬಸಯ್ಯ ಶಾಸ್ತ್ರಿ ಇದ್ದರು.
ಶರಣಬಸಪ್ಪ ಪಾಟೀಲ ಅಷ್ಟಗಿ ಸ್ವಾಗತಿಸಿದರು. ಮಡಿವಾಳಯ್ಯ ಸ್ವಾಮಿ ಜೇರಟಗಿ ನಿರೂಪಿಸಿದರು. ವಿಠಲರಾವ ಮಾಸ್ತರ ವಂದಿಸಿದರು.
ಕಾರ್ಯಕ್ರಮದ ನಂತರ ಚಂದ್ರಕಾಂತ ಶೀಲವಂತ ಭೂಸನೂರ ದಂಪತಿಯಿಂದ ಗುರುಪಾದಲಿಂಗ ಮಹಾಶಿವಯೋಗಿಗಳಿಗೆ ತುಲಾಭಾರ ಸೇವೆ ನೆರವೇರಿಸಲಾಯಿತು. ಶಿವಶಂಕರ ಬಿರಾದಾರ ಕಲಾತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.