ಚಿಂಚೋಳಿ: ತಾಲ್ಲೂಕಿನಲ್ಲಿ ರೋಹಿಣಿ ಮಳೆ ಶುಭಾರಂಭ ಮಾಡಿದ್ದು, ಸೋಮವಾರ ಗುಡುಗು ಮಿಂಚು ಸಹಿತ ಹದವಾದ ಮಳೆ ಸುರಿದಿದೆ.
ತಾಲ್ಲೂಕಿನ ರಟಕಲ್ನಿಂದ ಕೋಡ್ಲಿ ಮಧ್ಯೆ ಮಳೆ ಅಬ್ಬರ ಅಧಿಕವಾಗಿತ್ತು. ಬಿರುಗಾಳಿ ಸಹಿತ ಸುರಿದ ಮಳೆಯಿಂದ ಮರಗಳು ಧರೆಗುರುಳಿವೆ. ಕಲಬುರ್ಗಿ– ಚಿಂಚೋಳಿ ಮಾರ್ಗದ ಹೊಡೇಬೀರನಹಳ್ಳಿ ಬಳಿ ಮರಗಳು ನೆಲಕ್ಕುರುಳಿದ್ದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ರಾಜ್ಯ ಹೆದ್ದಾರಿ 32ಕ್ಕೆ ಸೇರಿದ ಸುಲೇಪೇಟ ಉಮ್ಮರಗಾ ರಸ್ತೆಯಲ್ಲಿ ಎರಡು ಕಡೆಗಳಲ್ಲಿ ನೂರಾರು ವಾಹನಗಳು ನಿಂತಿದ್ದವು ಎಂದು ಪ್ರತ್ಯಕ್ಷದರ್ಶಿಗಳಾದ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಲ್ಲೂಕಿನ ಸೂಗೂರು ಸುಂಠಾಣ ಮಧ್ಯೆ ಭಾರಿ ಮಳೆ ಸುರಿದು ಹೊಲಗಳಲ್ಲಿ ನೀರು ನಿಂತಿದ್ದಲ್ಲದೇ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಮರಗಳು ಉರುಳಿದ್ದವು ಎಂದು ಸಿದ್ಧಾರೂಢ ಉದನೂರು ಮಾಹಿತಿ ನೀಡಿದರು.
ಮುಂಗಾರು ಆರಂಭದ ದಿನಗಳಲ್ಲಿ ಮೇ 25ರಿಂದ ಪ್ರಾರಂಭವಾದ ರೋಹಿಣಿ ಮಳೆ ತನ್ನ ಮೊದಲ ಚರಣದಲ್ಲಿ ಶುಭಾರಂಭ ಮಾಡಿದೆ. ತಾಲ್ಲೂಕಿನ ಚಿಮ್ಮಾಇದಲಾಯಿ, ಸುಲೇಪೇಟ, ರಟಕಲ್, ಚಿಂಚೋಳಿ, ಕೋಡ್ಲಿ ಭಾರಿ ಸುತ್ತಲೂ ಮಳೆ ಸುರಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.