ಕಲಬುರ್ಗಿ: ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್ ಅವರನ್ನು ಭಾನುವಾರ ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ಬಳ್ಳಾರಿಯ ಐಜಿಪಿ ಎಸ್. ಮುರುಗನ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಅಲೋಕಕುಮಾರ್ ಅವರು ಸುಗಮ ಸಂಚಾರ, ಹೆಲ್ಮೆಟ್ ಕಡ್ಡಾಯ ಹಾಗೂ ರೌಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ ನಾಗರಿಕರ ಮೆಚ್ಚುಗೆ ಗಳಿಸಿದ್ದರು.
ಸುಪ್ರೀಂ ಕೋರ್ಟ್ ನೀಡಿದ್ದ ಹೆಲ್ಮೆಟ್ ಕಡ್ಡಾಯ ಆದೇಶವನ್ನು ಕಲಬುರ್ಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರು. ಸವಾರರ ಮನವೊಲಿಸಲು ಖುದ್ದಾಗಿ ರಸ್ತೆಗಿಳಿದು ಕಾರ್ಯಾಚರಣೆ ನಡೆಸಿದ್ದರು. ಜಾಗೃತಿ ಜಾಥಾ, ಸುರಕ್ಷತಾ ಸಪ್ತಾಹ, ಸವಾರರಿಗೆ ಗುಲಾಬಿ ಹೂವು, ಲಾಡು ವಿತರಿಸಿ ಗಮನ ಸೆಳೆದಿದ್ದರು.
ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಕರಿಚಿರತೆ ಅಲಿಯಾಸ್ ಮಲ್ಲಿಕಾರ್ಜುನ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ರೌಡಿಗಳಿಗೆ ಖಡಕ್ ಸಂದೇಶ ರವಾನಿಸಿದ್ದರು. ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ)ಯನ್ನು ರೌಡಿ ಶೀಟರ್ಗಳ ಮೇಲೆ ಬಳಸಿ ಕಾನೂನು ಸುವ್ಯವಸ್ಥೆ ಭಂಗ ತರುವವರಿಗೆ ಪಾಠ ಕಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.