ಆಳಂದ: ತಾಲ್ಲೂಕಿನ ತಡೋಳಾ ಗ್ರಾಮ ಪಂಚಾಯಿತಿಯಲ್ಲಿ ₹14 ಲಕ್ಷ ಅನುದಾನ ದುರ್ಬಳಕೆಯ ತನಿಖೆಗೆ ಒತ್ತಾಯಿಸಿ ಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಮಂಗಳವಾರ ಐದನೇ ದಿನಕ್ಕೆ ಕಾಲಿಟ್ಟಿದ್ದು, ಮೂವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ ಉಪವಾಸ ನಿರತ ಅಸ್ಪಾಕ್ ಮುಲ್ಲಾ, ಪರಶುರಾಮ, ಮೈಲಾರಿ ಅಸ್ವಸ್ಥರಾಗಿ ಖಜೂರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರತಿಭಟನಕಾರರನ್ನು ಉದ್ದೇಶಿಸಿ ಮುಖಂಡ ಮೌಲಾ ಮುಲ್ಲಾ ಮಾತನಾಡಿ, ‘ಪಂಚಾಯಿತಿಗೆ ನಿಯೋಜನೆಗೊಂಡ ಪಿಡಿಒ ಒಂದು ತಿಂಗಳಲ್ಲಿ ₹14 ಲಕ್ಷ ಅವ್ಯವಹಾರ ಮಾಡಿದ್ದಾರೆ. ತಕ್ಷಣ ಬೇರೆಡೆ ವರ್ಗವಾಗಿದ್ದಾರೆ. ಇದು ಪೂರ್ವ ನಿಯೋಜಿತ ಭ್ರಷ್ಠಾಚಾರವಾಗಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ’ ಎಂದು ಅವರು ಆಪಾದಿಸಿದರು.
ಪ್ರತಿಭಟನೆ ಸ್ಥಳಕ್ಕೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿದರು. ಪ್ರತಿಭಟನಾಕಾರರು ಅವ್ಯವಹಾರದ ತನಿಖೆ ಹಾಗೂ ಪಿಡಿಒ ಅವರ ವಿರುದ್ಧ ಕ್ರಮಕ್ಕೆ ಬಿಗಿ ಪಟ್ಟು ಹಿಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.