ಪ್ರಜಾವಾಣಿ ವಾರ್ತೆ
ಕಲಬುರ್ಗಿ: ಕೋವಿಡ್ ಲಸಿಕೆ ಪಡೆದ ಇಲ್ಲಿನ ಆರು ಶುಶ್ರೂಷಾ ವಿದ್ಯಾರ್ಥಿಗಳಿಗೆ ಶುಕ್ರವಾರ ಸಣ್ಣ ಪ್ರಮಾಣದ ಅಡ್ಡಪರಿಣಾಮ ಉಂಟಾಗಿದ್ದು, ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಜಿಮ್ಸ್ನ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶುಕ್ರವಾರ ಮಧ್ಯಾಹ್ನ ಕೋವಿಶೀಲ್ಡ್ ಲಸಿಕೆ ಪಡೆದಿದ್ದರು. ಇವರಲ್ಲಿ ಆರು ಮಂದಿಗೆ ಸಂಜೆ ವೇಳೆ ವಾಂತಿ ಆಗಿದ್ದು, ತಲೆನೋವು ಕಾಣಿಸಿಕೊಂಡಿದೆ. ತಕ್ಷಣ ಎಲ್ಲರನ್ನೂ ಜಿಮ್ಸ್ನ ಒಳರೋಗಿಗಳ ವಿಭಾಗದಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನಡೆಸಲಾಯಿತು. ಯಾರಿಗೂ ಹೆಚ್ಚಿನ ತೊಂದರೆ ಅಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ
ಪ್ರತಿಕ್ರಿಯಿಸಿದ್ದಾರೆ.
‘ಯಾವುದೇ ಚುಚ್ಚುಮದ್ದನ್ನು ತೆಗೆದುಕೊಂಡ ನಂತರ ಕೆಲವರಿಗೆ ಸಣ್ಣ ಪ್ರಮಾಣದ ಪರಿಣಾಮಗಳು ಆಗುತ್ತವೆ. ಅದೇ ರೀತಿ ಕೋವ್ಯಾಕ್ಸಿನ್ಗೂ ಆಗಿದೆ. ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇದರ ಬಗ್ಗೆ ಯಾವುದೇ ಗೊಂದಲ ಬೇಡ’ ಎಂದೂ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.