ಕಲಬುರಗಿ: ‘ಭಾರತವು ವಿಜ್ಞಾನ, ತಂತ್ರಜ್ಞಾನ, ಹಣಕಾಸು ಮತ್ತು ಸೈನ್ಯದಲ್ಲಿ ಬೇರೆ ಯಾವುದೇ ರಾಷ್ಟ್ರವನ್ನು ಅವಲಂಬಿಸಿಲ್ಲ. ಪ್ರತಿಯೊಂದು ವಲಯದಲ್ಲೂ ಸ್ವಾವಲಂಬಿಯಾಗಿದ್ದು, ಸ್ವಯಂ ಸಬಲೀಕರಣದಿಂದ ಬೆಳೆಯುತ್ತಿದೆ’ ಎಂದು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ನಮ್ಮದು ಸಾರ್ವಭೌಮ ದೇಶ. ನಮಗೆ ಸ್ವತಂತ್ರ ನೀತಿಗಳಿವೆ. ಪ್ರಾಬಲ್ಯ ಸಾಧಿಸಲು ಮತ್ತು ನಿಗ್ರಹಿಸಲು ಪ್ರಯತ್ನಿಸುವ ಪ್ರತಿವಾದಿಗಳಿಗೆ ಭಾರತ ಯಾವಾಗಲೂ ಸರಿಯಾದ ಉತ್ತರ ನೀಡುತ್ತದೆ’ ಎಂದರು.
‘ವಿಕಸಿತ ಭಾರತ–2047ಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ ಗಮನಾರ್ಹವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಇಸ್ರೊ, ಡಿಆರ್ಡಿಒ ಮತ್ತು ಇತರ ಪ್ರಮುಖ ಸಂಸ್ಥೆಗಳೊಂದಿಗೆ ಸಿಯುಕೆ ಸಹಯೋಗ ಹೊಂದಿದೆ. ಸಿಯುಕೆಯ ಅಧ್ಯಾಪಕರು ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಮಾನವಿಕ ವಿಭಾಗಗಳಲ್ಲಿ ತಮ್ಮ ಯೋಜನೆಗಳ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಈ ರೀತಿಯಾಗಿ ರಾಷ್ಟ್ರ ನಿರ್ಮಾಣದಲ್ಲಿ ಸಿಯುಕೆ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದರು.
ಈ ಸಂದರ್ಭದಲ್ಲಿ ಪ್ರೊ.ಬಟ್ಟು ಸತ್ಯನಾರಾಯಣ ತಿರಂಗಾ ರ್ಯಾಲಿಗೆ ಚಾಲನೆ ನೀಡಿದರು. ಸಿಯುಕೆ ಕಾರ್ಯಕಾರಿ ಮಂಡಳಿಯ ಸದಸ್ಯ ಪ್ರೊ. ಪ್ರಮೋದ ಗಾಯಿ, ಹಣಕಾಸು ಅಧಿಕಾರಿ ಪ್ರೊ. ಆರ್.ಆರ್. ಬಿರಾದಾರ, ಕಾರ್ಯಕ್ರಮ ಸಂಯೋಜಕ ಬಸವರಾಜ ಕುಬಕಡ್ಡಿ, ರಂಗನಾಥ, ಪ್ರೊ. ಚನ್ನವೀರ, ಪ್ರೊ. ಭೋಸ್ಲೆ, ರಾಜಶ್ರೀ ಉಪಸ್ಥಿತರಿದ್ದರು. ರೇಷ್ಮಾ ಮತ್ತು ಪ್ರಕಾಶ್ ನಿರೂಪಣೆ ಮಾಡಿದರು. ಜಯದೇವಿ ಮತ್ತು ನಾಕೋಡ ರಾಷ್ಟ್ರಗೀತೆ ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.