ADVERTISEMENT

18 ತಿಂಗಳಲ್ಲಿ 8 ಮುಖ್ಯಾಧಿಕಾರಿ ವರ್ಗ

ಅಫಜಲಪುರ ಪುರಸಭೆ; ಅಭಿವೃದ್ಧಿ ಕಾಮಗಾರಿ ಕುಂಠಿತ

ಶಿವಾನಂದ ಹಸರಗುಂಡಗಿ
Published 23 ಮೇ 2022, 3:58 IST
Last Updated 23 ಮೇ 2022, 3:58 IST
ಅಫಜಲಪುರದ ಪುರಸಭೆ ಕಾರ್ಯಾಲಯ
ಅಫಜಲಪುರದ ಪುರಸಭೆ ಕಾರ್ಯಾಲಯ   

ಅಫಜಲಪುರ: ಪುರಸಭೆಯಲ್ಲಿ 18 ತಿಂಗಳುಗಳಲ್ಲಿ ಬರೋಬ್ಬರಿ 8 ಮುಖ್ಯಾಧಿಕಾರಿಗಳು ಹಾಗೂ 3 ಕಿರಿಯ ಎಂಜಿನಿಯರ್‌ಗಳ ವರ್ಗಾವಣೆಯಾಗಿದೆ. ಇದೇ ಕಾರಣಕ್ಕಾಗಿ ಪಟ್ಟಣದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮುಖ್ಯಾಧಿಕಾರಿಗಳಾದ ಕೈಸರ್ ಹುಸೇನಿ, ಬಾಬುರಾವ ಮೇಲಿನಕೇರಿ, ಅಶೋಕ ಬಿಲಗುಂದಿ ಎರಡೆರಡೂ ಬಾರಿ ವರ್ಗಾವಣೆ ಆಗಿದ್ದಾರೆ. ಈಚೆಗೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಅವರು 3 ತಿಂಗಳ ಹಿಂದೆ ವರ್ಗಾವಣೆ ಆಗಿದ್ದಾರೆ. ಸದ್ಯ ಮುಖ್ಯಾಧಿಕಾರಿಯಾಗಿ ಸುರೇಶ ಬಬಲಾದ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಕಿರಿಯ ಎಂಜನಿಯರ್‌ಗಳ ವರ್ಗಾ ವಣೆಯೂ ನಡೆದಿದೆ. ಶಾಂತಪ್ಪ ಹೊಸೂರ, ದೇವೆಂದ್ರಪ್ಪ, ಲೋಕೇಶ ಅವರ ವರ್ಗಾವಣೆಯಾಗಿದೆ. ಸದ್ಯಕ್ಕೆ ಎಸ್‌.ಸಿ. ಸೊಂಪುರ ಎಂಬುವವರು ಕಿರಿಯ ಎಂಜನಿಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ADVERTISEMENT

ಹೊಸಬರು ಅಧಿಕಾರ ವಹಿಸಿ ಕೊಂಡ ಮೇಲೆ, ಬ್ಯಾಂಕ್ ಖಾತೆ ಬದಲಾ ವಣೆ ಸೇರಿ ಇತರ ದಾಖಲೆಗಳ ಹೆಸರು ಬದಲಾಗಬೇಕು. ಜತೆಗೆ ಸಿಬ್ಬಂದಿ ಸಭೆ ಕರೆದು, ಅಭಿವೃದ್ಧಿ ಆರಂಭಿಸಬೇಕು ಎನ್ನುವಷ್ಟರಲ್ಲಿಯೇ ವರ್ಗಾವಣೆ ಆಗಿರು ತ್ತದೆ. ಈ ಹಿಂದೆ ವರ್ಗಾವಣೆ ಆಗಿರುವ ಅಶೋಕ ಬಿಲಗುಂದಿ ಅವರು ತಮ್ಮ ವರ್ಗಾವಣೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಪುರಸಭೆ ಅಧ್ಯಕ್ಷೆ ರೇಣುಕಾ ರಾಜಶೇಖರ ಪಾಟೀಲ ಮಾಹಿತಿ ನೀಡಿ, ‘ಎಸ್‌ಎಫ್‌ಸಿ ಮುಖ್ಯಸ್ಥರಿಂದ ಪುರಸಭೆಗೆ ₹ 4 ಕೋಟಿ ಹಾಗೂ ನಗರೋತ್ಥಾನ ಅಡಿಯಲ್ಲಿ₹ 10 ಕೋಟಿ ಅನುದಾನ ಬಂದಿದೆ. ಅದನ್ನು ಕ್ರಿಯಾ ಯೋಜನೆ ಮಾಡಿ ಅನುಮೋದನೆಗೆ ಕಳುಹಿಸಲಾಗಿದೆ. ಸದ್ಯ ಟೆಂಡರ್ ಕರೆಯಬೇಕಿತ್ತು. ಆದರೆ ದಿಢೀರನೆ ಮುಖ್ಯಾಧಿಕಾರಿಗಳ ವರ್ಗಾವಣೆಯಾಗಿದ್ದರಿಂದ ಕಾಮಗಾರಿ ಗಳು ಸ್ಥಗಿತಗೊಂಡಿವೆ’ ಎಂದು ಹೇಳಿದ್ದಾರೆ.

ಸರ್ಕಾರ ಮಟ್ಟದಲ್ಲಿ ವರ್ಗಾವಣೆಗೆ ನಿಯಮ ಇರಬೇಕು. ಅಧಿಕಾರಿಗಳು ವರ್ಗಾವಣೆಯಾಗಿ ಬಂದ ಮೇಲೆ ಕನಿಷ್ಠ 2 ವರ್ಷವಾದರೂ ಕೆಲಸ ಮಾಡಬೇಕು. ಮೇಲಿಂದ ಮೇಲೆ ವರ್ಗಾವಣೆ ಆಗುವುದರಿಂದ ಅಭಿ ವೃದ್ಧಿ ಕುಂಠಿತವಾಗುತ್ತಿದೆ. ಜನ ಪ್ರತಿನಿಧಿಗಳು ಇಲ್ಲಿಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇನ್ನಾ ದರೂ ಜನಪ್ರತಿನಿಧಿಗಳು ಎಚ್ಚರ ವಹಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.