ಕಲಬುರ್ಗಿ: ಹುಬ್ಬಳ್ಳಿಯಿಂದ ಕೊಪ್ಪಳ ಬಳ್ಳಾರಿ ಮೂಲಕ ಬೆಂಗಳೂರಿಗೆ ಹೊರಟಿದ್ದ ಹಂಪಿ ಎಕ್ಸ್ಪ್ರೆಸ್ ರೈಲು 7 ಗಂಟೆ ತಡವಾಗಿ ಹೊರಟಿದ್ದರಿಂದ 600ಕ್ಕೂ ಅಧಿಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿರಾಗಿದ್ದಾರೆ. ಅವರಿಗೆ ಮರು ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (ಎಐಡಿಎಸ್ಒ) ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿನಾಥ ಸಿಂಘೆ ಹಾಗೂ ಕಾರ್ಯದರ್ಶಿ ಹನುಮಂತ ಎಸ್.ಎಚ್., ‘ರೈಲು ವಿಳಂಬವಾಗಿದ್ದರಿಂದ ವಿದ್ಯಾರ್ಥಿಗಳು, ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗದೇ ತಮ್ಮ ಭವಿಷ್ಯದ ಬಗ್ಗೆ ಆತಂಕ ಎದುರಿಸುವಂತಾಗಿದೆ. ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರ ಒಂದನ್ನು ಏಕಾಏಕಿ 30 ಕಿ.ಮೀ. ದೂರದಲ್ಲಿರುವ ಮತ್ತೊಂದು ಕಡೆ ಸ್ಥಳಾಂತರ ಮಾಡಿದ್ದರಿಂದ ಅನೇಕ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರವನ್ನು ತಲುಪದೆ, ಉತ್ತಮ ರೀತಿಯಲ್ಲಿ ನೀಟ್ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗಲಿಲ್ಲ. ತಮ್ಮದಲ್ಲದ ತಪ್ಪಿನಿಂದಾಗಿ ನೀಟ್ ಪರೀಕ್ಷೆ ಅವಕಾಶ ವಂಚಿತ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯ ಅವಕಾಶ ನೀಡಬೇಕು’ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಒಡಿಶಾದಲ್ಲಿ ತೀವ್ರತರದ ಚಂಡಮಾರುತದ ಕಾರಣ ಆ ರಾಜ್ಯದಲ್ಲಿ ನೀಟ್ ಪರೀಕ್ಷೆಗೆ ಬೇರೊಂದು ದಿನಾಂಕವನ್ನು ನಿಗದಿಪಡಿಸಲಾಗುವುದೆಂದು ತಿಳಿದುಬಂದಿದೆ. ಅದೇ ದಿನಾಂಕದಂದು ರಾಜ್ಯದ ಅವಕಾಶ ವಂಚಿತ ವಿದ್ಯಾಥಿಗಳಿಗೂ ನೀಟ್ ಮರು ಪರೀಕ್ಷೆ ನಡೆಸಬೇಕು' ಎಂದಿದ್ದಾರೆ.
ಈ ಹಿಂದೆ ರಾಜ್ಯಮಟ್ಟದ ಸಿಇಟಿಯು ಅತ್ಯಂತ ಸಮರ್ಪಕವಾಗಿ ನಿರಾಂತಕವಾಗಿ ನಡೆಯುತ್ತಿತ್ತು. ರಾಷ್ಟ್ರಮಟ್ಟದ ನೀಟ್ ಜಾರಿಯಾದ ಮೇಲೆ ಅನೇಕ ಗಂಭೀರ ಸಮಸ್ಯೆಗಳು ತಲೆದೂರಿವೆ. ರಾಷ್ಟ್ರಮಟ್ಟದ ಪರೀಕ್ಷೆಯನ್ನು ನಡೆಸುವುದಕ್ಕೆ ಬೇಕಾದ ಸರಿಯಾದ ಸಿದ್ಧತೆ ಮಾಡಿಕೊಳ್ಳದ, ಸಮರ್ಪಕ ಮೂಲಸೌಕರ್ಯವಿಲ್ಲದ ಎನ್ಟಿಎ ಪ್ರತಿ ವರ್ಷ ಏನಾದರೊಂದು ಯಡವಟ್ಟುಗಳನ್ನು ಮಾಡುತ್ತಾ, ವಿದ್ಯಾರ್ಥಿಗಳನ್ನು ಸಂಕಷ್ಟಗಳಿಗೆ ದೂಡುತ್ತಲೇ ಇದೆ. ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.