ADVERTISEMENT

‘ಚಳವಳಿ ಕಟ್ಟಲು ವೈಚಾರಿಕ ಬೆಳವಣಿಗೆ ಅಗತ್ಯ‘

ಕಲಬುರಗಿಯಲ್ಲಿ ಎಐಡಿವೈಒ ರಾಜ್ಯ ಕೌನ್ಸಿಲ್ ಸದಸ್ಯರ ಸಭೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 14:16 IST
Last Updated 29 ಜನವರಿ 2023, 14:16 IST
ಎಐಡಿವೈಒ ರಾಜ್ಯ ಕೌನ್ಸಿಲ್ ಸಭೆಯಲ್ಲಿ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಜಿ.ಎಸ್. ಕುಮಾರ್ ಮಾತನಾಡಿದರು. ಸಂಘಟನೆಯ ರಾಜ್ಯ ಸಮಿತಿ ಸದಸ್ಯರು ಇದ್ದರು
ಎಐಡಿವೈಒ ರಾಜ್ಯ ಕೌನ್ಸಿಲ್ ಸಭೆಯಲ್ಲಿ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಜಿ.ಎಸ್. ಕುಮಾರ್ ಮಾತನಾಡಿದರು. ಸಂಘಟನೆಯ ರಾಜ್ಯ ಸಮಿತಿ ಸದಸ್ಯರು ಇದ್ದರು   

ಕಲಬುರಗಿ: ‘ನಿರುದ್ಯೋಗ ಸಮಸ್ಯೆಯು ಬಹಳ ದೊಡ್ಡ ಗಂಭೀರ ಸಮಸ್ಯೆಯಾಗಿ ಬೆಳೆದು ನಿಂತಿದೆ. ಯುವಕರು ಇದರಿಂದ ಮಾನಸಿಕವಾಗಿ ಜರ್ಝರಿತರಾಗಿದ್ದಾರೆ. ಇದರ ವಿರುದ್ಧ ಬಲಿಷ್ಠ ಯುವಜನ ಚಳುವಳಿ ಕಟ್ಟಲು ವೈಚಾರಿಕವಾಗಿ ಬೆಳೆಯಬೇಕು’ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆಯ (ಎಐಡಿವೈಒ) ಅಖಿಲ ಭಾರತ ಉಪಾಧ್ಯಕ್ಷ ಡಾ. ಜಿ.ಎಸ್. ಕುಮಾರ್ ಸಲಹೆ ನೀಡಿದರು.

ನಗರದಲ್ಲಿ ಭಾನುವಾರ ಸಂಘಟನೆಯ ರಾಜ್ಯ ಕೌನ್ಸಿಲ್ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಅಖಿಲ ಭಾರತ ಸಮಿತಿಯ ಕರೆಯ ಮೇರೆಗೆ ನಮ್ಮ ದೇಶದ ರಾಜರಹಿತ ಪಂಥದ ಅಗ್ರಗಣ್ಯ ನಾಯಕರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ವಾರ್ಷಿಕ ಕಾರ್ಯಕ್ರಮಗಳು ರಾಜ್ಯದಾದ್ಯಂತ ನಡೆದಿವೆ. ಯುವ ಯುವಜನರಲ್ಲಿ ಹೊಸ ಸ್ಪೂರ್ತಿ ತಂದಿವೆ. ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದು ಅಧಿಕಾರಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಹರಸಾಹಸಪಡುತ್ತಿವೆ. ಜನರ ಸಮಸ್ಯೆ ಪರಿಹಾರ ಮಾಡದೆ ಬರಿ ಆರೋಪ ಪ್ರತ್ಯಾರೋಪದಲ್ಲಿ ಮುಳುಗಿವೆ. ಇದನ್ನು ಯುವಜನರು ಅರಿಯಬೇಕು. ಚುನಾವಣೆಯಿಂದ ನಿರುದ್ಯೋಗ ಸಮಸ್ಯೆ ಪರಿಹಾರ ಆಗುವುದಿಲ್ಲ. ಸಂಘಟಿತ ಹೋರಾಟವೊಂದೇ ಅದಕ್ಕೆ ಪರಿಹಾರ’ ಎಂದರು.

ಎಐಡಿವೈಒ ಅಖಿಲ ಭಾರತ ಸದಸ್ಯ ಮಲೈಪಾಲ್ ಮಾತನಾಡಿ, ‘ಜನರು ಪ್ರತಿನಿತ್ಯ ತಮ್ಮ ಒಪ್ಪೊತ್ತಿನ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ನಮ್ಮ ಸಾಮಾಜಿಕ ಹೋರಾಟಕ್ಕೆ ಯಾವುದೇ ಕೊರತೆ ಇಲ್ಲ. ಆದ್ದರಿಂದ ಜನರ ಸಂಕಷ್ಟಕ್ಕೆ ಸ್ಪಂದಿಸಿ ಹೋರಾಟ ಕಟ್ಟಬೇಕು’ ಎಂದು ಹೇಳಿದರು.

ADVERTISEMENT

ಸಂಘಟನೆಯ ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಬಾಳ್ ಮಾತನಾಡಿ, ‘ಯುವಜನರನ್ನು ವೈಚಾರಿಕವಾಗಿ ಗಟ್ಟಿಗೊಳಿಸಲು ರಾಜ್ಯ ಮಟ್ಟದಲ್ಲಿ ಪೆಬ್ರುವರಿ 25, 26 ರಂದು ಕೊಪ್ಪಳದಲ್ಲಿ ಯುವಜನ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದರು.

ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ, ಉಪಾಧ್ಯಕ್ಷರು ಹಾಗೂ 20 ಜಿಲ್ಲೆಗಳಿಂದ ಬಂದ ಕೌನ್ಸಿಲ್ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.