ADVERTISEMENT

ಕಲಬುರ್ಗಿ: ‘ರಟಕಲ್‌ ಹೋಬಳಿ ಕೇಂದ್ರಕ್ಕೆ ಆಗ್ರಹಿಸಿ ನಿಯೋಗ’

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 11:28 IST
Last Updated 3 ಆಗಸ್ಟ್ 2021, 11:28 IST

ಕಲಬುರ್ಗಿ: ‘ಆಳಂದ ತಾಲ್ಲೂಕಿನ ರಟಕಲ್‌ ಗ್ರಾಮವನ್ನು ಹೋಬಳಿ ಕೇಂದ್ರ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿ ಘೋಷಿಸಲು ರಾಜ್ಯ ಸರ್ಕಾರಕ್ಕೆ 15 ದಿನಗಳ ಗಡವು ನೀಡಲಾಗುವುದು. ಬೇಡಿಕೆ ಈಡೇರದಿದ್ದರೆ ಹೆದ್ದಾರಿ ತಡೆ, ಗ್ರಾಮಗಳ ಬಂದ್‌ ನಡೆಸಲಾಗುವುದು’ ಎಂದು ಹಿಂದೂ ಕಾಗೃತಿ ಸೇನೆಯ ಕಾಳಗಿ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ ಚೋಕಾ ಆಗ್ರಹಿಸಿದರು.

‘ರಟಕಲ್‌ಗಿಂತ ಚಿಕ್ಕದಾದ, ಜನಸಂಖ್ಯೆ ಕಡಿಮೆ ಇರುವ ಊರನ್ನು ಜಿಲ್ಲಾ ಪಂಚಾಯಿತಿ ಕ್ಷೇತ್ರ ಮಾಡಲಾಗಿದೆ. ಆದರೆ, ಇದಕ್ಕೆ ಬೇಕಾದ ಎಲ್ಲ ಅರ್ಹತರಗಳು ಹಾಗೂ ಅನುಕೂಲತೆ ಹೊಂದಿರುವ ರಟಕಲ್‌ ಜನರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಈ ಬೇಡಿಕೆ ಈಡೇರದಿದ್ದರೆ ಹೆದ್ದಾರಿ ಬಂದ್‌ ಹಾಗೂ ಗ್ರಾಮಗಳ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗುವುದು’ ಎಂದು ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ಸಚಿವ ಸಂಪುಟ ರಚನೆ ಮುಗಿದ ಬಳಿಕ ಗ್ರಾಮದ ಮುಖಂಡರು, ಸ್ವಾಮೀಜಿಗಳು, ಶಾಸಕರು, ಸಂಸದರನ್ನು ಒಳಗೊಂಡ ನಿಯೋಗದ ಜತೆಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗುವುದು. ಕೊನೆ ಪಕ್ಷ ರಟಕಲ್‌– ಅಣಕಲ್‌ ಸೇರಿಸಿ ಜಿಲ್ಲಾ ಪಂಚಾಯಿತಿ ಕ್ಷೇತ್ರವೆಂದು ಘೋಷಿಸಲು ಒತ್ತಡ ಹೇರಲಾಗುವುದು’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಶ್ರೀಕಾಂತ ನುಂಗಾರಿ ಹೇಳಿದರು.

ADVERTISEMENT

‘ನಮ್ಮ ಬೇಡಿಕೆ ಈಡೇರಿಕೆಗಾಗಿ ಜುಲೈ 29ರಂದು ರಟಕಲ್‌– ಕಲಬುರ್ಗಿ 50 ಕಿ.ಮೀ ಪಾದಯಾತ್ರೆ ಮಾಡಿದ್ದೇವೆ. ಈ ಹೋರಾಟ ಮುಂದುವರಿಯಲಿದೆ. ಅವಶ್ಯಕತೆ ಬಿದ್ದರೆ ನಮಗೆ ಆಗುತ್ತಿರುವ ಅನ್ಯಾಯ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಾಗುವುದು’ ಎಂದು ಕೋಲಿ ಸಮಾಜದ ತಾಲ್ಲೂಕು ಘಟಕದ ಸಂಚಾಲಕ ಬಸವರಾಜ ತಳವಾರ ಹೇಳಿದರು.

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗೌರಿಶಂಕರ ಕಿಣ್ಣಿ, ಬಿಜೆಪಿ ಮುಖಂಡ ಸಂತೋಷ ಹಂದ್ರಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.