ಕಲಬುರ್ಗಿ: ಆಶಾ ಕಾರ್ಯಕರ್ತೆಯರಿಗೆ ನಾಲ್ಕು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನೂರಾರು ಆಶಾಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ ‘ಆಶಾ’ಗಳು, ‘ಕೇಂದ್ರದ ಬಾಕಿ ಇರುವ ಪ್ರೋತ್ಸಾಹಧವನ್ನೂ ಕೂಡಲೇ ಬಿಡುಗಡೆ ಮಾಡಬೇಕು. ಎಲ್ಲಾ ಬಗೆಯ ಸರ್ವೆಗಳಿಗೆ ನೀಡುವ ಹಣವನ್ನೂ ನಿಗದಿತ ಸಮಯದಲ್ಲಿ ಬಿಡುಗಡೆ ಮಾಡಬೇಕು. ನಿತ್ಯ ಹತ್ತಾರು ಕಿಲೋ ಮೀಟರ್ಗಳಿಂದ ರೋಗಿಗಳನ್ನು ಕರೆದುಕೊಂಡು ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ಸಿ)ಕ್ಕೆ ಬರುವ ಆಶಾಗಳಿಗೆ ಪ್ರತಿ ಪಿಎಚ್ಸಿಯಲ್ಲಿ ವಿಶ್ರಾಂತಿ ಕೋಣೆಯನ್ನು ಒದಗಿಸಬೇಕು. ಅವಶ್ಯ ಇರುವವರಿಗೆ ಸಿಮ್ ಕಾರ್ಡ್ ಒದಗಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಆಶಾ ಕಾರ್ಯಕರ್ತೆಯರ ಕುಂದು–ಕೊರತೆ ಸಭೆಗಳನ್ನು ಏರ್ಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಂ. ಶರ್ಮಾ, ಮುಖಂಡರಾದ ವಿ.ಜಿ. ದೇಸಾಯಿ, ರಾಘವೇಂದ್ರ ಎಂ.ಜಿ., ಸಂತೋಷ ಹಿರವೆ, ಆಶಾ ಮುಖಂಡರಾದ ಸಾವಿತ್ರಿ, ಮೋನಮ್ಮ, ರವಿಕಲಾ, ಅನಸೂಯಾ, ತಾಯಮ್ಮ, ಶಿವಲಿಂಗಮ್ಮ, ಮಹಾದೇವಿ, ಲಕ್ಷ್ಮಿ ಮಂದೇವಾಲ, ನಾಗಮ್ಮ ಕೊಲ್ಲುರ, ಜಯಶ್ರೀ, ಬೋರಮ್ಮ, ಭಾಗ್ಯ, ಸಾವಳಗಿ ಸೇರಿದಂತೆ ನೂರಾರು ‘ಆಶಾ’ಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.