ADVERTISEMENT

ಅಯೋಧ್ಯೆಯಲ್ಲಿ ಸಂಶೋಧನಾ ಕೇಂದ್ರ; ಶಂಕರ ಭಾರತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 6:19 IST
Last Updated 12 ಫೆಬ್ರುವರಿ 2023, 6:19 IST
ಅನುಗ್ರಹವಚನ ನೀಡಿದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಶಂಕರ ಭಾರತಿ ಸ್ವಾಮೀಜಿ
ಅನುಗ್ರಹವಚನ ನೀಡಿದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಶಂಕರ ಭಾರತಿ ಸ್ವಾಮೀಜಿ   

ಕಲಬುರಗಿ: ‘ಸನಾತನ ಧರ್ಮದ ಕುರಿತು ಜನರಿಗೆ ಹೆಚ್ಚಿನ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಮೈಸೂರಿನ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಶಂಕರ ಭಾರತಿ ಸ್ವಾಮೀಜಿ ಹೇಳಿದರು.

ನಗರದ ನೂತನ ವಿದ್ಯಾಲಯ ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾಭವನದಲ್ಲಿ ಶನಿವಾರ ವೇದಾಂತ ಭಾರತಿ ಆಯೋಜಿಸಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಅನುಗ್ರಹವಚನ ನೀಡಿ ಮಾತನಾಡಿದರು.

‘ಸನಾತನ ಧರ್ಮದ ಮೂಲ ಸಿದ್ಧಾಂತಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸ ಲಾಗುತ್ತಿದೆ’ ಎಂದರು.

ADVERTISEMENT

‘ದೇಶದಲ್ಲಿ ಪ್ರವಾಸ ಕೈಗೊಂಡಾಗ ಜನರಲ್ಲಿ ಸನಾತನ ಧರ್ಮದ ಬಗ್ಗೆ ಆಸಕ್ತಿ ಇರುವುದನ್ನು ಕಂಡು ಬಂದಿದೆ. ಜನರಲ್ಲಿ ಭಕ್ತಿ ಇದೆ. ಆದರೆ, ಮಾರ್ಗದರ್ಶನದ ಕೊರತೆ ಎದ್ದು ಕಾಣುತ್ತದೆ. ಶಂಕರಾಚಾರ್ಯ ತತ್ವಗಳನ್ನು ಪ್ರಸಾರ ಮಾಡಲಾಯಿತು’ ಎಂದರು.

ವಿಶ್ವ ಹಿಂದೂ ಪರಿಷತ್‌ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಲಿಂಗರಾಜಪ್ಪ ಅಪ್ಪ ಮಾತನಾಡಿ, ‘ಸರ್ಕಾರದ ಅಧೀನದಲ್ಲಿ ಇರುವ ರಾಜ್ಯದ 3,500 ಹಿಂದೂ ದೇವಸ್ಥಾನಗಳ ನಿರ್ವಣೆಯ ಹೊಣೆಯಲ್ಲಿ ಭಕ್ತರಿಗೂ ಅವಕಾಶ ಕೊಡಬೇಕು. ಭಕ್ತರಿಂದ ಬಂದ ಕಾಣಿಕೆಯನ್ನು ಸರ್ಕಾರ ಆಯಾ ಮಂದಿರಗಳ ಅಭಿವೃದ್ಧಿಗೆ ಬಳಸುತ್ತಿಲ್ಲ. ಹೀಗಾಗಿ, ಮಠ–ಮಂದಿರಗಳ ಸಮಿತಿಗಳಿಗೆ ಹಸ್ತಾಂತರಿಸಬೇಕು’ ಎಂದು ಹೇಳಿದರು.

ಭಕ್ತಿಯ ಗುರುವಂದನೆ

ಶಂಕರ ಭಾರತಿ ಸ್ವಾಮೀಜಿಗಳು ದೇಶದ 22 ರಾಜ್ಯಗಳಲ್ಲಿ 160 ದಿನ ಪ್ರವಾಸ ಮಾಡಿ, ಸನಾತನ ಧರ್ಮದ ಪ್ರಸಾರ ಮಾಡಿದರು. ಹೀಗಾಗಿ, ಶನಿವಾರ ಜಿಲ್ಲೆಯ ಸಾವಿರಾರು ಭಕ್ತರು ಸ್ವಾಮೀಜಿಗೆ ಗುರುವಂದನೆ ಸಲ್ಲಿಸಿದರು.

ಕಳೆದ ಐದು ದಿನಗಳಲ್ಲಿ ಶ್ರೀಪಾದಂಗಳವರು ನಗರದ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಿದ್ದಾಪುರ ಕಾಲೊನಿಯ ರಾಯರ ಮಠ, ಬಸವೇಶ್ವರ ಕಾಲೊನಿಯ ರಾಯರ ಮಠದಲ್ಲಿ ಶ್ರೀರಾಮ ಭುಜಂಗ ಪ್ರಯಾತ ಸ್ತೋತ್ರ ಸಮರ್ಪಣೆ ಕಾರ್ಯಕ್ರಮಗಳು ಶ್ರೀಗಳ ಸಾನ್ನಿಧ್ಯದಲ್ಲಿ ಜರುಗಿದವು.

ಈ ಎಲ್ಲ ಕಾರ್ಯಕ್ರಮಗಳಲ್ಲಿ ನಗರದ ಅಪಾರ ಭಕ್ತರು ಪಾಲ್ಗೊಂಡಿದ್ದು, ಶುಕ್ರವಾರ ಸಂಗಮೇಶ್ವರ ಸಭಾಗೃಹದಲ್ಲಿ ವಿದ್ಯಾರ್ಥಿಗಳು ಮತ್ತು ಮಾತೆಯರು ಶ್ರೀರಾಮ ಭುಜಂಗ ಪ್ರಯಾತ ಸ್ತೋತ್ರ ಸಮರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಲಕ್ಷ್ಮಿನಾರಾಯಣ ದೇವಸ್ಥಾನದ ಸದಾಶಿವ ಮಹಾರಾಜ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಬಿಜೆಪಿ ಮುಖಂಡ ಶಿವಕಾಂತ ಮಹಾಜನ್, ಶಾಸಕ ಎಂ.ವೈ.ಪಾಟೀಲ, ಕೆಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ದಯಾಘನ್ ಧಾರವಾಡಕರ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಜಗದೀಶ ಹುನಗುಂದ, ವೇದಾಂತ ಭಾರತಿ ನಿಲ್ಲಾ ಸಂಚಾಲಕ ನಾಗೇಶ ಮೋಗರೆ, ಗಿರಿಶ ಕಣ್ಣೂರ, ಪ್ರಖ್ಯಾತ ಪೂಜಾರಿ, ಪಿ.ಎಚ್.ಕುಲಕರ್ಣಿ, ರವಿ ಲಾತೂರಕರ್, ಪ್ರಹ್ಲಾದ ಪೂಜಾರಿ, ಸುರೇಶ ಹೇರೂರ, ಚಂದ್ರಕಾಶತ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.