ಕಲಬುರಗಿ: ಜೇವರ್ಗಿ ತಾಲ್ಲೂಕಿನ ಸೊನ್ನ ಗ್ರಾಮದ ರೇವಣಸಿದ್ದೇಶ್ವರ ಜಾತ್ರೆಯ ಅಂಗವಾಗಿ ನಡೆದ ಟ್ರ್ಯಾಕ್ಟರ್ ಸ್ಪರ್ಧೆ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಅವಾಚ್ಯ ಪದಗಳಿಂದ ಬೈದು, ಅವರ ಮೇಲೆ ಕೈ ಮಾಡಿದ ಆರೋಪಿಯನ್ನು ನೆಲೋಗಿ ಪೊಲೀಸರು ವಶಕ್ಕೆ ಪಡೆದರು. ಬಳಿಕ ಮುಚ್ಚಳಿಕೆ ಬರೆಯಿಸಿಕೊಂಡು ಬಿಡುಗಡೆ ಮಾಡಿದರು.
ಟ್ರ್ಯಾಕ್ಟರ್ ಸ್ಪರ್ಧೆಯ ವೇಳೆ ಚನ್ನಬಸಪ್ಪ ಬೈಲಪ್ಪ, ಅಸಭ್ಯವಾಗಿ ವರ್ತಿಸುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಕುಡಿದ ನಶೆಯಲ್ಲಿ ಚನ್ನಬಸಪ್ಪ, ಪೊಲೀಸರಿಗೆ ಅವಾಚ್ಯ ಪದಗಳಿಂದ ಬೈದು, ಕೈ ಮಾಡಿದ್ದಾರೆ. ತಕ್ಷಣವೇ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದು, ಬಿಎನ್ಎಸ್ಎಸ್ ಕಲಂ 129 ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದ ಪ್ರಮುಖರು ಠಾಣೆಗೆ ಬಂದು, ‘ಆರೋಪಿಯನ್ನು ಬಿಡುಗಡೆ ಮಾಡಿ, ನಾವು ಆತನಿಗೆ ಬುದ್ಧಿ ಹೇಳುತ್ತೇವೆ’ ಎಂದು ಮನವಿ ಮಾಡಿಕೊಂಡಿದ್ದಾರೆ. ಠಾಣೆಯಲ್ಲಿ ಆರೋಪಿಯಿಂದ ಮುಚ್ಚಳಿಕೆ ಬರೆಯಿಸಿಕೊಂಡು ಕಳುಹಿಸಲಾಗಿದೆ ಎಂದಿದ್ದಾರೆ.
ಮನಸೋ ಇಚ್ಛೆ ಹೊಡೆತ: ಪೊಲೀಸರ ಮೇಲೆ ಕೈ ಮಾಡಿದ ಆರೋಪದ ಮೇಲೆ ಯುವಕನನ್ನು ಪೊಲೀಸರು ಮನಸೋ ಇಚ್ಛೆ ಹೊಡೆದು ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಟ್ರ್ಯಾಕ್ಟರ್ ಸ್ಫರ್ಧೆಯ ಸ್ಥಳದಲ್ಲಿ ಏಳೆಂಟು ಪೊಲೀಸರು ಯುವಕನನ್ನು ಸುತ್ತುವರಿದು, ಆತನ ತಲೆಯ ಕೂದಲು ಹಿಡಿದು ಲಾಠಿಯಿಂದ ಹೊಡೆಯುತ್ತಾ, ಒದೆಯುತ್ತಾ ಅಲ್ಲಿಂದ ಕರೆದೊಯ್ದರು. ಆತನ್ನು ಬಿಡಿಸಲು ಬರುತ್ತಿದ್ದ ಸ್ಥಳೀಯರ ಮೇಲೂ ಲಾಠಿ ಬೀಸಿದ್ದಾರೆ ಎನ್ನಲಾದ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.