ಚಿಂಚೋಳಿ: ತಾಲ್ಲೂಕಿನಲ್ಲಿ ಭಾರಿ ಮಳೆ ಮತ್ತು ಪ್ರವಾಹದ ಹೊಡೆತದಿಂದ ತೋಟದಲ್ಲಿನ ಬಾಳೆಗಿಡಗಳು ನೆಲಸಮವಾಗಿದ್ದು, ಬೆಳೆಗಾರರಿಗೆ ಭಾರಿ ನಷ್ಟವಾಗಿದೆ.
ತಾಲ್ಲೂಕಿನ ದೇಗಲಮಡಿಯ ಬಸವಲಿಂಗಪ್ಪ ಚಿಪಾತಿ ಅವರ ತೋಟಕ್ಕೆ ಮೂರನೇ ಬಾರಿ ನುಗ್ಗಿದ ಪ್ರವಾಹ 8 ಎಕರೆ ಬಾಳೆ ಗಿಡಗಳನ್ನು ನೆಲಸಮಗೊಳಿಸಿ ರೈತನ ಬದುಕು ಬೀದಿಗೆ ತಂದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ ಬೆಳೆ ಕೈಗೆ ಬರುವ ಮೊದಲೇ ಹಾಳಾಗಿದ್ದು, ರೈತನ ನೋವು ಅರಣ್ಯರೋದನವಾಗಿದೆ.
ತಾಲ್ಲೂಕಿನ ಅಣವಾರದಲ್ಲಿ ಹತ್ತಾರು ರೈತರು ತಮ್ಮ ತೋಟದಲ್ಲಿ ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಇದೇ ಗ್ರಾಮದ ರಸ್ತೆ ಬದಿಯಲ್ಲಿ ಬರುವ ರಾಮರಾವ್ ಪಾಟೀಲ ಮೋಘಾ ಅವರ ತೋಟದಲ್ಲಿ 4 ಎಕರೆ ಬಾಳೆ ತೋಟ ಪ್ರವಾಹದ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದೆ.
ಗಿಡಗಳು ಸಂಪೂರ್ಣವಾಗಿ ಮುರಿದು ನೆಲಮೇಲೆ ಚಾಪೆಯಂತೆ ಬಿದ್ದಿರುವುದು ರೈತರಿಂದ ನೋಡಲು ಸಾಧ್ಯವಾಗದಂತಾಗಿವೆ.
ಇದರ ಜತೆಗೆ ವಿವಿಧೆಡೆ ಈರುಳ್ಳಿ ತೋಟಗಳು, ಪಪ್ಪಾಯ ಬೆಳೆಗಳು ಸಂಪೂರ್ಣ ಹಾಳಾಗಿವೆ. ದೇಗಲಮಡಿಯ ಸಿದ್ದು ಮಗಿ ಅವರ ತೋಟದಲ್ಲಿನ ಸೀಬೆ ಗಿಡಗಳಿಗೂ ಪ್ರವಾಹ ಬರೆ ಹಾಕಿದೆ. ತರಕಾರಿ ಬೆಳೆಗಾರರಿಗೆ ಹಾಕಿದ ಬೀಜ ಮರಳದಂತಾಗಿದೆ. ತಾಲ್ಲೂಕಿನ ಶಿವರಾಮ ನಾಯಕ ತಾಂಡಾದಲ್ಲಿ ತೇಜು ಜಾಧವ ಅವರು ನೆರಳು ಪರದೆ ಮೂಲಕ ಬೆಳೆದ ಟೊಮಾಟೊ ಹಾಳಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.
ಈಗಾಗಲೇ ಹಾನಿಗೀಡಾದ ತೋಟಗಳಿಗೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ರೈತರಿಗೆ ಬೇಗ ಪರಿಹಾರ ಧನ ನೀಡಬೇಕೆಂದು ಪ್ರಗತಿಪರ ರೈತ ಚಿತ್ರಶೇಖರ ಪಾಟೀಲ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.