ADVERTISEMENT

ಸುರಕ್ಷಿತ ಸ್ಥಳಗಳಿಗೆ ತೆರಳಲು ಡಿ.ಸಿ ಸೂಚನೆ

ಹೆಚ್ಚಲಿದೆ ಮಹಾರಾಷ್ಟ್ರದಿಂದ ಬರುವ ನೀರಿನ ಮಟ್ಟ, ಬೀಮಾ, ಕಾಗಿಣಾ ನದಿ ದಡದಲ್ಲಿರುವ ಗ್ರಾಮಗಳಿಗೆ ‍ಅಪಾಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 15:13 IST
Last Updated 17 ಅಕ್ಟೋಬರ್ 2020, 15:13 IST
ಭೀಮಾ ಪ್ರವಾಹದಿಂದ ಕಲಬುರ್ಗಿ ತಾಲ್ಲೂಕಿನಲ್ಲಿ ಹಾನಿಗೊಳಗಾದ ಕಬ್ಬಿನ ಗದ್ದೆಯನ್ನು ಸುವರ್ಣಾ ಮಾಲಾಜಿ ಪರಿಶೀಲಿಸಿದರು
ಭೀಮಾ ಪ್ರವಾಹದಿಂದ ಕಲಬುರ್ಗಿ ತಾಲ್ಲೂಕಿನಲ್ಲಿ ಹಾನಿಗೊಳಗಾದ ಕಬ್ಬಿನ ಗದ್ದೆಯನ್ನು ಸುವರ್ಣಾ ಮಾಲಾಜಿ ಪರಿಶೀಲಿಸಿದರು   

ಕಲಬುರ್ಗಿ: ಅಫಜಲಪುರ ತಾಲ್ಲೂಕಿನ ಸೊನ್ನ ಬ್ಯಾರೇಜ್‌ನಿಂದ ಶನಿವಾರ ಭೀಮಾ ನದಿಗೆ 8 ಲಕ್ಷ ಕ್ಯುಸೆಕ್‌ ನೀರು ಬಿಡಲಾಗಿದೆ. ಮುಂದೆ ಇನ್ನೂ ಹೆಚ್ಚಿನ ನೀರು ಹರಿಬಿಡುವ ಸಾಧ್ಯತೆ ಇದೆ. ಇದು ಭೀಕರ ಪ್ರವಾಹದ ಮುನ್ಸೂಚನೆಯಾಗಿದೆ. ಆದ್ದರಿಂದ ಅಫಜಲಪುರ, ಜೇವರ್ಗಿ, ಚಿತ್ತಾಪುರ ಹಾಗೂ ಶಹಾಬಾದ್‌ ತಾಲ್ಲೂಕಿನಲ್ಲಿಜಿಲ್ಲೆಯ ಭೀಮಾ ಹಾಗೂ ಕಾಗಿಣಾ ನದಿ ತೀರದ ದಂಡೆಯ ಗ್ರಾಮಸ್ಥರು ಕೂಡಲೇ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ತಿಳಿಸಿದ್ದಾರೆ.

ಪ್ರವಾಹದಲ್ಲಿ ಸಿಲುಕಿರುವವರ ಸಂರಕ್ಷಣೆಗೆ ಈಗಾಗಲೆ ಮೂರು ಎನ್‌ಡಿಆರ್‌ಎಫ್ ತಂಡಗಳು ಪ್ರವಾಹ ಪೀಡಿತ ಪ್ರದೇಶದಲ್ಲಿ ಕಾರ್ಯೋನ್ಮುಖ ಆಗಿವೆ. ಎಸ್‌ಡಿಅರ್‌ಎಫ್, ಪೊಲೀಸ್‌ ಹಾಗೂ ಅಗ್ನಿಶಾಮಕ ದಳದ ತಂಡಗಳು ಸಹ ಕ್ಷೇತ್ರದಲ್ಲಿ 24 ಗಂಟೆ ಕಾಲ ಕಾರ್ಯನಿರ್ವಹಿಸುತ್ತಿವೆ. ಸೇನೆ ಮತ್ತು ವಾಯುಸೇನೆಯತಂಡಗಳು ಜಿಲ್ಲೆಗೆ ಬರಲಿವೆ. ಹೀಗಾಗಿ, ಸಾರ್ವಜನಿಕರು ಭಯಪಡಬೇಕಾಗಿ‌ಲ್ಲ ಎಂದು ಅವರು ಹೇಳಿತಿದ್ದಾರೆ.

ಮೂಲಸೌಕರ್ಯ ಕಲ್ಪಿಸಿ: ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯಗಳಿಂದ ಹೆಚ್ಚಿನ ನೀರು ಭೀಮಾ ನದಿಗೆ ಬಿಡುತ್ತಿರುವುದರಿಂದ ಜಿಲ್ಲೆಯಲ್ಲಿ ನೆರೆ ಸಂತ್ರಸ್ತರಿಗೆ ಆಶ್ರಯ ನೀಡಲು ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ವಿ.ವಿ.ಜೋತ್ನ್ಯಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ADVERTISEMENT

ಬೆಡ್‌ಶೀಟ್‌, ಟವೆಲ್, ಸಾಬೂನು, ಟೂತ್‌ವಬ್ರಷ್‌, ಬಾಚಣಿಕೆ, ಕೊಬ್ಬರಿಎಣ್ಣೆ, ಸಾಕ್ಸ್‌ ಮತ್ತು ತಲಾ ಮೂರು ಜೊತೆ ಬಟ್ಟೆಯ ಮಾಸ್ಕ್‌ಗಳನ್ನು ವಿತರಿಸಬೇಕೆಂದು ತಿಳಿಸಿದ್ದಾರೆ.

ಶುದ್ಧ ಆಹಾರ ವಿತರಿಸಿ: ಸಂತ್ರಸ್ತರಿಗೆ ಶುದ್ಧ ಆಹಾರ ಮತ್ತು ಕುಡಿಯುವ ನೀರು ಒದಗಿಸಬೇಕು. ಬೆಳಿಗ್ಗೆ ಉಪ್ಪಿಟ್ಟು, ಶಿರಾ ಮತ್ತು ಸೂಸುಲಾ, ಮಧ್ಯಾಹ್ನ ಊಟಕ್ಕೆ ಚಪಾತಿ, ಪಲ್ಯ, ಅನ್ನ– ಸಾಂಬಾರ್, ಶೇಂಗಾ ಹಿಂಡಿ, ಮೊಸರು, ಒಂದು ಮೊಟ್ಟೆ ಮತ್ತು ರಾತ್ರಿ ಊಟಕ್ಕೆ ಅನ್ನ– ಸಾಂಬಾರ್, ಉಪ್ಪಿನಕಾಯಿ, ಕಾಳು ಪಲ್ಯ ಹಾಗೂ ತರಕಾರಿ ಪಲ್ಯ ಒದಗಿಸಬೇಕೆಂದು ಸೂಚಿಸಿದ್ದಾರೆ.

ಬಾಕ್ಸ್=–1

ಜಿ.ಪಂ ಅಧ್ಯಕ್ಷೆ ಭೇಟಿ

ಕೊರಳ್ಳಿ ಡ್ಯಾಂನಿಂದ ನೀರಿನಿಂದ ಹಾನಿಗೊಳಗಾದ ಆಳಂದ ಕಲಬುರ್ಗಿ ತಾಲ್ಲೂಕಿನ ಭೂಸನೂರು ಮತ್ತು ಕೊರಳ್ಳಿ ಗ್ರಾಮಗಳ ರಸ್ತೆ, ಸೇತುವೆ ಹಾಗೂ ಹೊಲಗಳನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ ವೀಕ್ಷಿಸಿದರು.

‘ಪ್ರವಾಹದಿಂದ ರಸ್ತೆ ಮತ್ತು ಸೇತುವೆಗಳು ಕೆಟ್ಟು ಹೋಗಿದ್ದು, ಸರಿಪಡಿಸುವಂತೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗೆ ಸೂಚಿಸಿದರು. ರೈತರ ಬೆಳೆ ಹಾನಿಯ ಬಗ್ಗೆ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ನಿಖರವಾಗಿ ಸರ್ವೆ ಮಾಡಿ ವರದಿ ನೀಡಬೇಕು ಎಂದರು. ಕೊರಳ್ಳಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ನಿರಾಶ್ರಿತರ ಸಮಸ್ಯೆ ಆಲಿಸಿದರು.

ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಗುರುಶಾಂತಗೌಡ ಶಾಲಿವಾಹನ ಪಾಟೀಲ, ಸದಸ್ಯ ಹರ್ಷನಂದ ಸುಭಾಷ್ ಗುತ್ತೇದಾರ, ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸೂಗೂರ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಪ್ರಭುರಾಜ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.