ಕಲಬುರಗಿ: ‘ಬೇಡ ಜಂಗಮವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಶಿಫಾರಸು ಮಾಡಬೇಕು’ ಎಂದು ಮಾಜಿ ಸಚಿವ ಎಚ್.ಆಂಜನೇಯ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಳ್ಳು ದಾಖಲೆಗಳನ್ನು ನೀಡಿ ಬೇಡ ಜಂಗಮ ಎಂದು ಎಸ್ಸಿ ಪ್ರಮಾಣ ಪತ್ರ ಪಡೆದಿದ್ದಾರೆ. ಅವರ ಮೇಲೆ ಕ್ರಮಕೈಗೊಳ್ಳಬೇಕು. ಬೇಡ ಹಾಗೂ ಬುಡ್ಗ ಜಂಗಮ ಹಾಗೂ ವೀರಶೈವ ಜಂಗಮರೇ ಬೇರೆ, ಮಾಂಸ ಸೇವನೆ ಮಾಡುತ್ತಿದ್ದ ಬೇಡ ಜಂಗಮರೇ ಬೇರೆ’ ಎಂದರು.
‘ಆಂಧ್ರ ಪ್ರದೇಶದಿಂದ ಬಂದಿರುವ ಬೇಡ ಜಂಗಮ ಅವರು ಬೇಟೆಯಾಡುತ್ತಿದ್ದರು. ಆದರೆ, ರಾಜ್ಯದಲ್ಲಿ ಬೇಡ ಜಂಗಮದವರು ಯಾರೂ ಇಲ್ಲ. ಆ ಜಾತಿ ನಶಿಸಿ ಹೋಗಿದೆ. ಜಾತಿ ಗಣತಿ ಸಮೀಕ್ಷೆ ಪೂರ್ಣಗೊಳ್ಳದಿರುವುದರಿಂದ ಮೇ 28ರವರೆಗೆ ಆನ್ಲೈನ್ ಮೂಲಕ ಸಲ್ಲಿಸಲು ಅವಧಿಯನ್ನು ವಿಸ್ತರಣೆ ಮಾಡಲಾಗಿದೆ’ ಎಂದರು.
‘ಆಯೋಗ ಪಾರದರ್ಶಕವಾಗಿ ಸಮೀಕ್ಷೆ ಮಾಡಬೇಕು. ಯಾರಿಗೆ ಸೌಲಭ್ಯ ಸಿಕ್ಕಿಲ್ಲ ಅವರನ್ನೆಲ್ಲ ಪರಿಗಣಿಸುವ ಕೆಲಸ ಆಗಬೇಕು. ಅವಕಾಶ ವಚಿಂತ ಸಮುದಾಯಕ್ಕೆ ನ್ಯಾಯ ನೀಡಬೇಕು. ಸಮಾಜದ ಜನರ ಸಮೀಕ್ಷೆಯನ್ನು ಯಾರೂ ತಪ್ಪಿಸಬಾರದು, ಹುಟ್ಟಿದ ಮಗುವಿನ ಹೆಸರು ಸಮೀಕ್ಷೆಯಲ್ಲಿ ಸೇರಿಸಬೇಕು. ಎಲ್ಲ ಯುವ ಮುಖಂಡರು ಎಲ್ಲರಿಗೂ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶಾಮ ನಾಟೀಕಾರ, ಮಲ್ಲು ಜಿನಕೇರಿ, ನಾಗರಾಜ ಗುಂಡುಗುರ್ತಿ, ಸಂತೋಷ ಸಾವನೂರು, ರಾಜ ಹದನೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.