
ಕಲಬುರಗಿ: ಭಾರತೀಯ ದಲಿತ ಪ್ಯಾಂಥರ್ ವತಿಯಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ‘ದಲಿತರ ಮುಂದಿರುವ ಸವಾಲುಗಳು’ ಕುರಿತು ವಿಚಾರ ಸಂಕಿರಣವನ್ನು ಫೆ.3ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಕುಮಾರ ಕೃಪಾ ರಸ್ತೆಯ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ರಾಜ್ಯಾಧ್ಯಕ್ಷ ಮಲ್ಲಪ್ಪ ಎಂ.ಹೊಸ್ಮನಿ ತಿಳಿಸಿದರು.
‘ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ, ಅಣದೂರನ ವರಜ್ಯೋತಿ ಭಂತೇಜಿ ಸಾನ್ನಿಧ್ಯ ವಹಿಸುವರು. ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದು, ಚಿಂತಕ ದಿನೇಶ್ ಅಮಿನ್ಮಟ್ಟು ವಿಚಾರ ಮಂಡಿಸುವರು. ಸಚಿವರಾದ ಸತೀಶ್ ಜಾರಕಿಹೊಳಿ, ಎನ್.ಎಸ್.ಬೋಸರಾಜು ಪಾಲ್ಗೊಳ್ಳುವರು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಡಾ.ಬಿ.ಆರ್. ಅಂಬೇಡ್ಕರ್ ಸೇರಿ ಮಹಾಪುರುಷರ ವಿಚಾರಧಾರೆಗಳನ್ನು ಯುವಜನಕ್ಕೆ ಮುಟ್ಟಿಸುವುದು, ಸಂವಿಧಾನ ರಕ್ಷಿಸಲು ಸಮಾಜಗಳನ್ನು ಒಟ್ಟುಗೂಡಿಸಿ ಐಕ್ಯ ಹೋರಾಟಕ್ಕೆ ಅಣಿಗೊಳಿಸುವುದು, ಧರ್ಮದ ಹೆಸರಿನಲ್ಲಿ ಯುವಕರನ್ನು ಬೀದಿಪಾಲು ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿ ಧಿಕ್ಕರಿಸುವುದು, ಭೀಮಾ ಕೋರೆಗಾಂವ್ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವುದು ವಿಚಾರ ಸಂಕಿರಣದ ಉದ್ದೇಶವಾಗಿದೆ. ಕಲಬುರಗಿಯಿಂದ 300 ಜನ ಹೋಗುತ್ತಿದ್ದೇವೆ’ ಎಂದರು.
ಸಮಿತಿ ಜಿಲ್ಲಾಧ್ಯಕ್ಷ ಮಿಲಿಂದ ಸನಗುಂದಿ, ರಮೇಶ ಚಿಮ್ಮಇದಲಾಯಿ, ಭೀಮರಾಯ ನಗನೂರು, ಶರಣು ಉಡಗಿ, ಭರತ್ ಬುಳ್ಳಾ, ಪ್ರದೀಪ ಡೊಣ್ಣೂರ, ಭೀಮಾಶಂಕರ, ಸಂತೋಷ, ಕಲ್ಯಾಣರಾವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.