ADVERTISEMENT

ಅಫಜಲಪುರ: ಭೀಮಾ ನದಿ ಸೇರುತ್ತಿರುವ ಕೊಳಚೆ ನೀರು

ಅಫಜಲಪುರ ಜನರಿಗೆ ಕುಡಿಯಲು ಕಲುಷಿತ ನೀರು; ಪುನರ್‌ಬಳಕೆಗೆ ಕ್ರಮ ಕೈಗೊಳ್ಳಲು ಆಗ್ರಹ

ಶಿವಾನಂದ ಹಸರಗುಂಡಗಿ
Published 18 ಮಾರ್ಚ್ 2021, 3:55 IST
Last Updated 18 ಮಾರ್ಚ್ 2021, 3:55 IST
ಅಫಜಲಪುರ ಪಟ್ಟಣದ ವಿವಿಧ ವಾರ್ಡ್‌ಗಳಿಂದ ಹೊರಬರುವ ಕೊಳಚೆ ನೀರು ಭೀಮಾ ನದಿ ಸೇರುತ್ತಿದೆ
ಅಫಜಲಪುರ ಪಟ್ಟಣದ ವಿವಿಧ ವಾರ್ಡ್‌ಗಳಿಂದ ಹೊರಬರುವ ಕೊಳಚೆ ನೀರು ಭೀಮಾ ನದಿ ಸೇರುತ್ತಿದೆ   

ಅಫಜಲಪುರ: ಪಟ್ಟಣದ 30 ವಾರ್ಡುಗಳ ಮತ್ತು ಕೊಳಚೆ ಪ್ರದೇಶಗಳಲ್ಲಿ ಜನರು ಬಳಕೆ ಮಾಡಿದ ನೀರು ಚರಂಡಿ ಮೂಲಕ ಭೀಮಾ ನದಿಯನ್ನು ಸೇರುತ್ತಿದೆ. ಅದೇ ನದಿ ನೀರು ಶುದ್ಧೀಕರಣಗೊಳ್ಳದೆ ಕುಡಿಯಲು ಪಟ್ಟಣಕ್ಕೆ ಪೂರೈಕೆ ಆಗುತ್ತಿದೆ.

ಪುರಸಭೆ ಭೀಮಾ ನದಿ ನೀರನ್ನು ಶುದ್ಧೀಕರಿಸಲು ವ್ಯವಸ್ಥೆ ಮಾಡದಿರುವುದರಿಂದ ಜನರು ನದಿ ನೀರನ್ನು ಅನಿವಾರ್ಯವಾಗಿ ನೇರವಾಗಿ ಕುಡಿಯಲು ಬಳಸುವಂತಾಗಿದೆ.

ಪಟ್ಟಣದಲ್ಲಿ ಸುಮಾರು 40 ಸಾವಿರ ಜನಸಂಖ್ಯೆ ಇದ್ದು, ಜನರು ಬಳಕೆ ಮಾಡುವ ನೀರು, ತ್ಯಾಜ್ಯ ಎಲ್ಲವೂ ಪ್ರತಿದಿನ ಭೀಮಾ ನದಿಗೆ ಸೇರುತ್ತಿದೆ. ಪಟ್ಟಣದ ಪ್ರತಿಯೊಂದು ವಾರ್ಡ್‌ನಲ್ಲಿ ಚರಂಡಿ ವ್ಯವಸ್ಥೆ ಇದೆ. ಆದರೆ ಚರಂಡಿಗಳನ್ನು ಸ್ವಚ್ಛ ಮಾಡದ ಕಾರಣ ಕಾರಣ ರಸ್ತೆ ಮೇಲೆನೀರು ಹರಿಯುತ್ತಿದೆ.

ADVERTISEMENT

ಚರಂಡಿ ನೀರು ಹರಿದು ದೇವಲ ಗಾಣಗಾಪುರದ ದತ್ತ ದೇವಸ್ಥಾನ ಹತ್ತಿರ ಸಂಗಮದಲ್ಲಿ ಸೇರುತ್ತದೆ. ಅದರಲ್ಲಿಯೇ ಜನ ಸ್ನಾನ ಮಾಡುತ್ತಾರೆ ಮತ್ತು ಸಂಗಮದ ನೀರನ್ನು ತೀರ್ಥವೆಂದು ಯಾತ್ರಿಕರು ಸೇವನೆ ಮಾಡುತ್ತಾರೆ.

ಪಟ್ಟಣದಲ್ಲಿ ಹರಿಯುವ ಚರಂಡಿ ನೀರನ್ನು ಒಂದು ಕಡೆ ಸಂಗ್ರಹಿಸಿ ನೀರು ಪುನರ್ ಬಳಕೆಗೆ ಯೋಗ್ಯವನ್ನಾಗಿ ಮಾಡಬೇಕು. ಆಗ ಮಾತ್ರ ಚರಂಡಿ ನೀರು ಭೀಮಾ ನದಿಗೆ ನೇರವಾಗಿ ಸೇರುವುದಿಲ್ಲ. ಇದರಿಂದ ಜನರಿಗೆ ಅನುಕೂಲ ಆಗುತ್ತದೆ. ನೀರಿನ ಸದ್ಬಳಕೆ ಆಗುತ್ತದೆ ಎಂದು ಪಟ್ಟಣದ ನಾಗರಿಕರಾದ ಸಿದ್ರಾಮಪ್ಪಾ ಮನ್ಮಿ, ಸದಾಶಿವ ಮೇತ್ರಿ, ತಾಲ್ಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ್ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ಜಮಾದಾರ್ ಸಲಹೆ ನೀಡಿದ್ದಾರೆ.

‘ಚರಂಡಿ ನೀರು ಹರಿದು ಹೋಗಿ ಭೀಮಾನದಿ ಸೇರುತ್ತಿರುವುದು ಆಘಾತಕಾರಿ ಸಂಗತಿ. ಚರಂಡಿ ನೀರು ಒಂದು ಕಡೆ ಸಂಗ್ರಹ ಮಾಡುವ ವ್ಯವಸ್ಥೆ ಮಾಡಬೇಕಾಗಿದೆ. ಅದಕ್ಕಾಗಿ ಸಭೆಗಳಲ್ಲಿ ಚರ್ಚೆ ಮಾಡುತ್ತೇವೆ’ ಎಂದು ಪುರಸಭೆ ಸದಸ್ಯರಾದಶಿವು ಪದಕಿ, ವಿಶ್ವನಾಥ್ ಮಲಗಣ ಮತ್ತು ಶಿವಾನಂದ ಸಲಗರ್ ತಿಳಿಸಿದರು.

‘ಚರಂಡಿಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಲು ಸಿಬ್ಬಂದಿಗೆ ತಿಳಿಸಲಾಗುವುದು. ಜನರು ಕಸಕಡ್ಡಿಗಳನ್ನು ತ್ಯಾಜ್ಯ ವಸ್ತುಗಳನ್ನು ಬೀದಿಗಳಲ್ಲಿ ಹರಡಬಾರದು. ಪುರಸಭೆಯವರು ಗುರುತು ಮಾಡಿದ ಸ್ಥಳಗಳಲ್ಲಿ ಅದನ್ನು ಹಾಕಿದರೆ ಪೌರಕಾರ್ಮಿಕರು ಬೇರೆ ಕಡೆಗೆ ಸಾಗಿಸಲು ಅನುಕೂಲವಾಗುತ್ತದೆ’ ಎಂದು ಅವರು ಮನವಿ ಮಾಡಿದರು.

***

ಅಫಜಲಪುರಕ್ಕೆ ಕಲುಷಿತ ನೀರು ಪೂರೈಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ತಪ್ಪಿಸಲು ಚರಂಡಿ ನೀರನ್ನು ಪುನರ್ ಬಳಕೆ ಮಾಡುವ ವ್ಯವಸ್ಥೆ ಮಾಡಲಾಗುವುದು.
- ಎಂ.ವೈ.ಪಾಟೀಲ, ಶಾಸಕ

***

ಪುರಸಭೆ ಸಾಮಾನ್ಯ ಸಭೆಯಲ್ಲಿ ಚರಂಡಿ ನೀರು ಭೀಮಾನದಿಗೆ ಸೇರದಂತೆ ಪರ್ಯಾಯ ವ್ಯವಸ್ಥೆ ಮಾಡಲು ಸದಸ್ಯರು, ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಕ್ರಮ ಕೈಗೊಳ್ಳಲಾಗುವುದು.
-ರೇಣುಕಾ ಪಾಟೀಲ, ಪುರಸಭೆ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.