ADVERTISEMENT

ಕಳವು ಆರೋಪಿ ಬಂಧನ: 13 ಬೈಕ್ ವಶ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 5:06 IST
Last Updated 28 ಜುಲೈ 2022, 5:06 IST
ಕಲಬುರಗಿಯ ಎಂಎಸ್‌ಕೆ ಮಿಲ್ ಆವರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ ಸಿಸಿಬಿ ಪೊಲೀಸರು 
ಕಲಬುರಗಿಯ ಎಂಎಸ್‌ಕೆ ಮಿಲ್ ಆವರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ ಸಿಸಿಬಿ ಪೊಲೀಸರು    

ಕಲಬುರಗಿ: ನಗರದಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿ, ಸಿದ್ದಾರೂಢ ಕಾಲೊನಿ ನಿವಾಸಿ ಫತ್ರು ಷಾ ಪಾಶಾ (22) ಎಂಬ ಆರೋಪಿಯನ್ನು ಅಶೋಕ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಆರೋಪಿಯಿಂದ ₹ 6 ಲಕ್ಷ ಮೌಲ್ಯದ ವಿವಿಧ ಮಾಡಲ್‌ಗಳ 13 ಬೈಕ್‌ಗಳನ್ನು ವಶಪಡಿಸಿಕೊಂಡರು.

ಇಲ್ಲಿನ ಬಸವನಗರ ಬಡಾವಣೆಯ ನಿವಾಸಿ ಶಿವಮೂರ್ತಿ ಮರಲಿಂಗಪ್ಪ ಎಂಬುವರು ಬೈಕ್‌ ಕಳವು ಆಗಿರುವ ಬಗ್ಗೆ ಅಶೋಕ ನಗರ ಪೊಲೀಸ್‌
ಠಾಣೆಗೆ ದೂರು ನೀಡಿದ್ದರು. ಅಶೋಕ ನಗರ ಪೊಲೀಸ್ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಪಂಡಿತ್‌ ಸಗರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ರಚಿಸಿಕೊಂಡು ಕಾರ್ಯಾಚರಣೆ ನಡೆಸಿದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎಎಸ್‌ಐ ನಿಂಗಪ್ಪ, ಹೆಡ್‌ಕಾನ್‌ಸ್ಟೆಬಲ್‌ಗಳಾದ ವೈಜನಾಥ, ಭೀಮಾಶಂಕರ, ಕಾನ್‌ಸ್ಟೆಬಲ್‌ಗಳಾದ ಶಿವಲಿಂಗ, ನೀಲಕಂಠ ಕಾರ್ಯಾಚರಣೆ ನಡೆಸಿದರು.

ADVERTISEMENT

ಗಾಂಜಾ ಜಪ್ತಿ: ಬಂಧನ

ಕಲಬುರಗಿ: ನಗರದ ಎಂಎಸ್‌ಕೆ ಮಿಲ್ ಆವರಣದಲ್ಲಿ ಗಾಂಜಾ ಮಾರುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದರು.

ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಬಾಣತಿಹಾಳ ಗ್ರಾಮದ ಧರ್ಮರಾಜ ನಿಂಗಪ್ಪ ಬೇವಿನಕಟ್ಟಿ(23) ಮತ್ತು ನೆರೆಯ ಮಹಾರಾಷ್ಟ್ರ ರಾಜ್ಯದ ಉಸ್ಮಾನಾಬಾದ್ ಜಿಲ್ಲೆಯ ಉಮರ್ಗಾ ತಾಲ್ಲೂಕಿನ ಭೀಮ ನಾರಾಯಣ ಹೊನ್ನಳ್ಳಿ(32) ಬಂಧಿತ ಆರೋಪಿಗಳು. ಉಮರ್ಗಾ ತಾಲ್ಲೂಕಿನ ದಾಗತೆವಾಡಿ ಗ್ರಾಮದ ಲಕ್ಷ್ಮಣ ವೆಂಕಟ ಸೀತಾಳಗೇರೆ(36) ಪರಾರಿ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ₹2.30 ಲಕ್ಷ ಮೌಲ್ಯದ 23 ಕೆ.ಜಿ ಗಾಂಜಾ, 2 ಮೊಬೈಲ್, ₹2,800 ನಗದು, ಒಂದು ಬೈಕ್‌ ವಶಕ್ಕೆ ಪಡೆಯಲಾಗಿದೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ. ಸಿಸಿಬಿ ಪಿಐ ವಾಜೀದ ಪಟೇಲ, ತಹಶೀಲ್ದಾರ್ ವೆಂಕಣ್ಣಗೌಡ ಬಿ. ಪಾಟೀಲ, ಕಂದಾಯ ನಿರೀಕ್ಷಕ ಗುರುಪ್ರಸಾದ ಸಿದ್ದಯ್ಯ, ಸಿಸಿಬ ಘಟಕದ ಸಿಬ್ಬಂದಿ ರವೀಂದ್ರಕುಮಾರ, ವೇದರತ್ನ, ಮಲ್ಲಿಕಾರ್ಜುನ, ಶರಣಬಸಪ್ಪ, ಕೇಸುರಾಯ, ಸುನೀಲಕುಮಾರ, ಯಲ್ಲಪ್ಪ, ಶಿವಕುಮಾರ, ಅಶೋಕ ಕಟಕೆ, ರಾಜಕುಮಾರ, ವಿಶ್ವನಾಥ, ಅರವಿಂದ ಇದ್ದರು.

ಗಾಂಜಾ ಸಾಗಣೆ: ಇಬ್ಬರ ಬಂಧನ
ಕಮಲಾಪುರ: ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬುಧವಾರ ಬಂಧಿಸಿದ ಪೊಲೀಸರು 540 ಗ್ರಾಮ ಗಾಂಜಾ ಹಾಗೂ ₹ 30 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

ಕಾಳಗಿ ತಾಲ್ಲೂಕಿನ ರುಮ್ಮನಗುಡ ತಾಂಡಾದ ಸುನೀಲ ದೇವಿದಾಸ ರಾಠೋಡ್‌, ಕರಣ ನೀಲಕಂಠ ಜಾಧವ್‌ ಬಂಧಿತ ಆರೋಪಿಗಳಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸರು ಕಮಲಾಪುರ ತಾಲ್ಲೂಕಿನ ಭುಂಯಾರ ಕ್ರಾಸ್‌ ಬಳಿ ಕಾರು ತಡೆದು ದಾಳಿ ಮಾಡಿದ್ದಾರೆ.

ಎಸ್‌ಪಿ ಇಶಾ ಪಂತ್‌, ಎಎಸ್‌ಪಿ ಪ್ರಸನ್ನ ದೇಸಾಯಿ, ಡಿವೈಎಸ್‌ಪಿ ಶೀಲವಂತ ಮಾರ್ಗದರ್ಶನದಲ್ಲಿ ಸಿಪಿಐ ಶ್ರೀಮಂತ ಇಲ್ಲಳ ನೇತೃತ್ವದಲ್ಲಿ ಮಹಾಗಾಂವ ಪಿಎಸ್‌ಐ ಶಿವಶಂಕರ ಸುಬೇದಾರ, ಮಹಾಗಾಂವ ಪಿಎಸ್‌ಐ ಹುಸೇನ ಭಾಷಾ, ಸಿಬ್ಬಂಧಿಗಳಾದ ಕುಪೇಂದ್ರ, ಕಿಶನ್‌ ಜಾಧವ್, ರಾಜಶೇಖರ, ಅಶೋಕ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡಿಸಿದೆ. ಪ್ರಕರಣ ದಾಖಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.