ADVERTISEMENT

ದೂರದೃಷ್ಟಿಯಿಂದ ಕೆಲಸ ಮಾಡಿ: ಜಿ.ಅರುಣಕುಮಾರ್‌

ಬಿಜೆಪಿ ಕಾರ್ಯಕಾರಿಣಿ ಸಭೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 3:32 IST
Last Updated 24 ಅಕ್ಟೋಬರ್ 2021, 3:32 IST
ಕಲಬುರಗಿಯಲ್ಲಿ ಶನಿವಾರ ನಡೆದ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಮಹಿಳಾ ಮುಖಂಡರು ದೀಪ ಬೆಳಗಿಸಿದರು. ಜಿ.ಅರುಣಕುಮಾರ, ದತ್ತಾತ್ರೇಯ ಪಾಟೀಲ ರೇವೂರ, ಶಶೀಲ್‌ ಜಿ. ನಮೋಶಿ ಇದ್ದರು
ಕಲಬುರಗಿಯಲ್ಲಿ ಶನಿವಾರ ನಡೆದ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಮಹಿಳಾ ಮುಖಂಡರು ದೀಪ ಬೆಳಗಿಸಿದರು. ಜಿ.ಅರುಣಕುಮಾರ, ದತ್ತಾತ್ರೇಯ ಪಾಟೀಲ ರೇವೂರ, ಶಶೀಲ್‌ ಜಿ. ನಮೋಶಿ ಇದ್ದರು   

ಕಲಬುರಗಿ: ‘ನಾವು ದೂರದೃಷ್ಟಿ ಇಟ್ಟುಕೊಂಡು ಶಿಸ್ತುಬದ್ಧವಾಗಿ ಕೆಲಸ ಮಾಡಿದರೆ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ. ಮುಂದಿನ ಅವಧಿಯಲ್ಲೂ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಯನ್ನೇ ಅಧಿಕಾರಕ್ಕೆ ತರುವ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಬೇಕು’ ಎಂದು ಪಕ್ಷದ ರಾಜ್ಯ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ಅರುಣಕುಮಾರ್‌ ಕರೆ ನೀಡಿದರು.

ನಗರದಲ್ಲಿ ಶನಿವಾರ ನಡೆದ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರಗಳು ಮಾಡಿದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವುದು ಬಹಳ ಮುಖ್ಯ. ಇದಕ್ಕೆ ಕಾರ್ಯಕರ್ತರು, ಕಾರ್ಯಕಾರಿಣಿ ಸದಸ್ಯರು, ಮುಖಂಡರಲ್ಲಿ ಸಂಘಟನಾತ್ಮಕ ಶಕ್ತಿ ಬೇಕು. ಜನರ ವಿಶ್ವಾಸವನ್ನು ಯಾವಾಗಲೂ ಪಕ್ಷದ ಕಡೆಗೇ ಇರುವಂತೆ ಹಿಡಿದಿಟ್ಟುಕೊಳ್ಳುವಲ್ಲಿ ಪ್ರಾಮಾಣಿಕ ಶ್ರಮ ಹಾಕಬೇಕು’ ಎಂದೂ ಸಲಹೆ ನೀಡಿದರು.

‘ಕಾರ್ಯಕಾರಿಣಿ ಸಭೆಯಲ್ಲಿ ಅಶಿಸ್ತು ಅಥವಾ ನಿರಾಸಕ್ತಿಯನ್ನು ನಾನು ಸಹಿಸುವುದಿಲ್ಲ. ನೀವೆಲ್ಲ ಬಹಳ ಹುಮ್ಮಸ್ಸಿನಿಂದ ಪಾಲ್ಗೊಳ್ಳಬೇಕು. ಇಲ್ಲಿ ನಡೆಯುವ ಚರ್ಚೆ, ವಿಚಾರ ವಿನಿಮಯಗಳ ಮಹತ್ವ ಏನೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈಗಿನಿಂದಲೇ ಯೋಜನಾ ಬದ್ಧವಾಗಿ ಪಕ್ಷವನ್ನು ಎಲ್ಲ ಮಜಲುಗಳಲ್ಲಿ ಸಂಘಟಿಸಲು ಇಂಥ ಕಾರ್ಯಕಾರಿಣಿ ಸಭೆಗಳು ಬೇಕು. ಜಿಲ್ಲಾ ಹಾಗೂ ನಗರ ಘಟಕದ ಮುಖಂಡರು ತಮಗೆ ವಹಿಸಿದ ಎಲ್ಲ ಜವಾಬ್ದಾರಿಗಳನ್ನು ನಿಗದಿತ ಸಮಯದಲ್ಲೇ ಮುಗಿಸಬೇಕು. ವಿನಾಕಾರಣ ವಿಳಂಬ ಮಾಡುವುದು ಅಥವಾ ಮೈಗಳ್ಳತನ ಒಳ್ಳೆಯದಲ್ಲ’ ಎಂದರು.

ADVERTISEMENT

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ದಕ್ಷ ಆಡಳಿತದಲ್ಲಿ, ನಮ್ಮ ಸರ್ಕಾರ ಶತಕೋಟಿ ಕೋವಿಡ್ ಲಸಿಕೆ ನೀಡಿದೆ. ಈ ಸಾಧನೆಯನ್ನು ದೇಶದ ಪ್ರತಿಯೊಬ್ಬರೂ ಹೊಗಳುವಂತಾಗಿದೆ’ ಎಂದರು.

‘ಅಮೃತ್‌’ ಯೋಜನೆಯಡಿ ಕಲಬುರಗಿ ನಗರಕ್ಕೆ ₹ 150 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯನ್ನೇ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮಾತನಾಡಿ, ‘ಕಲಬುರಗಿ ನಗರ ಮತ್ತು ಜಿಲ್ಲೆಯ ಎಲ್ಲ ಕಡೆ ಬಿಜೆಪಿಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ಕೆಲಸವನ್ನು ಎಲ್ಲರೂ ಸೇರಿಕೊಂಡು ಮಾಡೋಣ. ಪೇಜ್‌ ಲೀಡರ್ಸ್‌, ಬೂತ್ ಮಟ್ಟ ಹಾಗೂ ವಾರ್ಡ್ ಪ್ರಮುಖರನ್ನು ಪ್ರೋತ್ಸಾಹಿಸೋಣ. ಜನತೆಗೆ ನಮ್ಮ ಸರ್ಕಾರಗಳ ಸಾಧನೆ ಅರ್ಥ ಮಾಡಿಸೋಣ’ ಎಂದರು.

ಬಿಜೆಪಿ ರಾಜ್ಯ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಮಾತನಾಡಿದರು. ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ‘ಕುಡಾ’ ಅಧ್ಯಕ್ಷ ದಯಾಘನ ಧಾರವಾಡಕರ್, ಪ್ರಭಾರಿ ರಾಜು ಹೊಗಿಮಠ, ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ, ಮಹಾದೇವ ಬೆಳಮಗಿ ಇದ್ದರು.

ಪಕ್ಷದ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ಕಳೆದ ಮೂರು ತಿಂಗಳಲ್ಲಿ ಪಕ್ಷದಿಂದ ನಡೆಸಿದ ಚಟುವಟಿಕಗಳ ಮಾಹಿತಿ ನೀಡಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವ ಅಷ್ಟಗಿ, ನಾಗರಾಜ ಮಹಾಗಾಂವ, ಅರುಣಕುಮಾರ ಕುಲಕರ್ಣಿ, ಸಾವಿತ್ರಿ ಕುಳಗೇರಿ, ವಿಜಯಕುಮಾರ ಸೇವಲಾನಿ, ರಾಜು ದೇವದುರ್ಗ, ಶಂಭುಲಿಂಗ ಬಳಟ್ಟಿ, ಪ್ರಭುಲಿಂಗ ಹಾದಿಮನಿ, ನಂದಕುಮಾರ ಮಾಲಿಪಾಟೀಲ, ಸೂರಜ್‌ ತಿವಾರಿ, ಶೀತಲ್ ಕುಲಕರ್ಣಿ, ಶ್ರೀನಿವಾಸ ದೇಸಾಯಿ, ಶರಣಬಸಪ್ಪ ಕಾಡಾದಿ, ರಾಜು ವಾಡೇಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.