ADVERTISEMENT

‘ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜನರ ಹಿಡಿಶಾಪ’: ಬಿ.ವೈ.ವಿಜಯೇಂದ್ರ

ಬಿಜೆಪಿ ಕಾರ್ಯಕರ್ತರ ವಿಭಾಗೀಯ ಸಮಾವೇಶ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 6:43 IST
Last Updated 20 ಜುಲೈ 2025, 6:43 IST
<div class="paragraphs"><p>ಕಲಬುರಗಿಯಲ್ಲಿ ನಡೆದ ವಿಭಾಗ ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮುಖಂಡರೊಂದಿಗೆ ಕೈ ಎತ್ತಿ ಒಗ್ಗಟ್ಟು ಪ್ರದರ್ಶಿಸಿದರು. </p></div>

ಕಲಬುರಗಿಯಲ್ಲಿ ನಡೆದ ವಿಭಾಗ ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮುಖಂಡರೊಂದಿಗೆ ಕೈ ಎತ್ತಿ ಒಗ್ಗಟ್ಟು ಪ್ರದರ್ಶಿಸಿದರು.

   

ಪ್ರಜಾವಾಣಿ ಚಿತ್ರ

ಕಲಬುರಗಿ: ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ನೆಪದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಹಾಲು, ಇಂಧನ, ಬಸ್ ಪ್ರಯಾಣ ದರ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುವ ರಾಜ್ಯದ ಜನರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.

ADVERTISEMENT

ನಗರದ ಖಮಿತಕರ್ ಭವನದಲ್ಲಿ ಶನಿವಾರ ಪಕ್ಷದ ವತಿಯಿಂದ ಆಯೋಜಿಸಿದ್ದ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳನ್ನೊಳಗೊಂಡ ಕಾರ್ಯಕರ್ತರ ವಿಭಾಗೀಯ ಮಟ್ಟದ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘16ರಿಂದ 17 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೂ ರಾಜ್ಯದ ಹದಗೆಟ್ಟ ಆರ್ಥಿಕತೆಯನ್ನು ಹಳಿಗೆ ತರಲು ಆಗುತ್ತಿಲ್ಲ. ನಂದಿನಿ ಹಾಲಿನ ದರ ಶೇ 23ರಷ್ಟು ಹೆಚ್ಚಳವಾಗಿದೆ. ಸಾರಿಗೆ ಪ್ರಯಾಣದ ದರ ಶೇ 25ರಷ್ಟು ಏರಿಕೆಯಾಗಿದೆ. ವಾಹನಗಳ ನೋಂದಣಿ ಶುಲ್ಕ ಶೇ 25ರಷ್ಟು ಹೆಚ್ಚಾಗಿದೆ. ರೈತರು ನೀರಾವರಿಗೆ ಬಳಸುವ ಪಂಪ್‌ಸೆಟ್‌ಗಳ ಅಳವಡಿಕೆಗೆ ಮುಂಚೆ ₹ 30 ಸಾವಿರ ಖರ್ಚಾಗುತ್ತಿತ್ತು. ಸಿದ್ದರಾಮಯ್ಯ ಅವರ ರೈತ ವಿರೋಧ ನೀತಿಯಿಂದಾಗಿ ಪಂಪ್‌ಸೆಟ್‌ ಅಳವಡಿಸಲು ₹ 2.5 ಲಕ್ಷದಿಂದ ₹ 3 ಲಕ್ಷ ಖರ್ಚಾಗುತ್ತಿದೆ. ಅಫಿಡವಿಟ್ ಮಾಡಿಸುವ ಶುಲ್ಕವನ್ನು ₹ 20ರಿಂದ ₹ 100ಕ್ಕೆ ಹೆಚ್ಚಿಸಿದ್ದಾರೆ. ಮುಖ್ಯಮಂತ್ರಿಗಳ ಸಲಹೆಗಾರರಾಗಿರುವ ಬಸವರಾಜ ರಾಯರಡ್ಡಿ ಅವರೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿದರೆ ಮಾತ್ರ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ ಎಂದು ಹೇಳುವ ಮೂಲಕ ರಾಜ್ಯದ ಕೆಟ್ಟ ಆರ್ಥಿಕ ವ್ಯವಸ್ಥೆಯನ್ನು ಅನಾವರಣಗೊಳಿಸಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ ಅವರು ಸರ್ಕಾರದ ಹಲವು ವೈಫಲ್ಯಗಳನ್ನು ಬಿಚ್ಚಿಡುತ್ತಲೇ ಇದ್ದಾರೆ’ ಎಂದರು.

‘ರಾಜ್ಯ ಸರ್ಕಾರ ತೀವ್ರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಗಾಣಿಗ ಸಮಾಜದ ಮಠಕ್ಕೆ ಮಂಜೂರಾಗಿದ್ದ ₹ 2 ಕೋಟಿ ಅನುದಾನ ಬಿಡುಗಡೆ ಮಾಡಲೂ ಸಚಿವರು ಕೇಳಿರುವ ಬಗ್ಗೆ ಸ್ವಾಮೀಜಿ ಅವರೇ ಆರೋಪಿಸಿದ್ದಾರೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಸಚಿವರು ರಾಜೀನಾಮೆ ನೀಡಬೇಕಾಯಿತು. ಈ ಸರ್ಕಾರ ಒಬ್ಬ ಅಮಾಯಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತು’ ಎಂದು ಹರಿಹಾಯ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ, ಶಾಸಕ ಬಸವರಾಜ ಮತ್ತಿಮಡು, ‘ವಿಕಸಿತ ಭಾರತ ಗುರಿಯನ್ನು ಸಾಕಾರಗೊಳಿಸಲು ದೇಶದ 140 ಕೋಟಿ ಜನ ಕೈ ಜೋಡಿಸಬೇಕಿದೆ. ಸೇವೆ, ಸುಶಾಸನ, ಬಡವರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ರಾಷ್ಟ್ರ ಮೊದಲು ಚಿಂತನೆಯನ್ನು ಸಾಕಾರಗೊಳಿಸಿ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಸಂಘಟನೆಗೆ ಬಲ ತುಂಬಬೇಕಿದೆ’ ಎಂದರು.

‘ತಳಮಟ್ಟದಲ್ಲಿ ಪಕ್ಷ ಬಲಪಡಿಸಲು ಕೆಲಸ ಮಾಡಬೇಕಿದ್ದು, ಹಿರಿಯರ ಮಾರ್ಗದರ್ಶನದಂತೆ ಎಲ್ಲ ತೊಡಕು ಬದಿಗೊತ್ತಿ ಸಂಘಟನೆಗೆ ಕೈ ಜೋಡಿಸಬೇಕು. ಪ್ರಮುಖರ ಸಭೆ, ಕಾರ್ಯಕಾರಿಣಿ ಸಭೆಗಳು ಸಂಘಟನಾ ಶಕ್ತಿ ಇನ್ನಷ್ಟು ಜಾಗೃತಗೊಳಿಸಲಿವೆ. ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರದ ದುರಾಡಳಿತಕ್ಕೆ ಮುಕ್ತಿ ನೀಡಿ, ಬಿಜೆಪಿ ಅಧಿಕಾರಕ್ಕೆ ತರಲು ಶಕ್ತಿ ನೀಡಲು ಶ್ರಮಿಸಲಾಗುತ್ತಿದೆ’ ಎಂದು ಹೇಳಿದರು.

ಮಾಜಿ ಸಂಸದ ಡಾ. ಉಮೇಶ ಜಾಧವ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ. ಅವಿನಾಶ್ ಜಾಧವ್, ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಪಕ್ಷದ ವಿಭಾಗೀಯ ಪ್ರಭಾರಿ ರಾಜಕುಮಾರ ಪಾಟೀಲ ತೇಲ್ಕೂರ, ಮಾಜಿ ಶಾಸಕರಾದ ಸುಭಾಷ್ ಗುತ್ತೇದಾರ, ದತ್ತಾತ್ರೇಯ ಪಾಟೀಲ ರೇವೂರ, ಮಾಜಿ ಸಚಿವ ಬಾಬುರಾವ ಚವಾಣ್, ಕಲಬುರಗಿ ಮಹಾನಗರ ಘಟಕದ ಅಧ್ಯಕ್ಷ ಚಂದು ಪಾಟೀಲ, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ, ನಿತಿನ್ ಗುತ್ತೇದಾರ ಸೇರಿದಂತೆ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ವಿಭಾಗ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು

‘ಪ್ರಧಾನಿ ಮೋದಿ ರಾಯಭಾರಿಗಳಾಗೋಣ’:

‘ಗುಜರಾತ್ ಮುಖ್ಯಮಂತ್ರಿ ಆ ಬಳಿಕ ದೇಶದ ಪ್ರಧಾನಿಯಾಗಿ ಒಟ್ಟಾರೆ 24 ವರ್ಷಗಳನ್ನು ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ರಾಯಭಾರಿಗಳಾಗಿ ಪ್ರತಿ ಗ್ರಾಮಗಳಿಗೆ ತೆರಳಿ ಅವರ ಸಾಧನೆಗಳನ್ನು ತಿಳಿಸಬೇಕಿದೆ’ ಎಂದು ಬಿ.ವೈ. ವಿಜಯೇಂದ್ರ ಕಾರ್ಯಕರ್ತರಿಗೆ ಸಲಹೆ ನೀಡಿದರು. ಮೋದಿಯವರು ಬಡವರು ರೈತರು ಮಹಿಳೆಯರು ಯುವಕರು ಎಂಬ ನಾಲ್ಕು ಜಾತಿಗಳನ್ನು ಗುರುತಿಸಿದ್ದಾರೆ. ಅವರ ಒಳಿತಿಗಾಗಿ ಜನಧನ್ ಕಿಸಾನ್ ಸಮ್ಮಾನ್ ಗರೀಬ್ ಕಲ್ಯಾಣ ಯೋಜನೆ ಸ್ಕಿಲ್ ಇಂಡಿಯಾ ಮೇಕ್ ಇನ್ ಇಂಡಿಯಾ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ರೂಪಿಸಿದ್ದಾರೆ. ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ದೇಶವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.