ಕಲಬುರ್ಗಿ: ‘ಬುದ್ಧ ಪ್ರತಿಪಾದಿಸಿದ ಅಹಿಂಸೆ, ಬಸವಣ್ಣನ ಕಾಯಕ ತತ್ವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಶಿಕ್ಷಣ-ಸಂಘಟನೆ-ಹೋರಾಟದ ಮಾರ್ಗಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಬಸವಕಲ್ಯಾಣದ ಜಾಗತಿಕ ಲಿಂಗವಂತ ಹರಳಯ್ಯ ಪೀಠದ ಮುಖ್ಯಸ್ಥೆ ಡಾ. ಗಂಗಾಬಿಕಾ ಪಾಟೀಲ ಹೇಳಿದರು.
ತಾಲ್ಲೂಕಿನ ತಾಜಸುಲ್ತಾನಪುರ ಗ್ರಾಮ ವ್ಯಾಪ್ತಿಯ ಸೈಯದ್ ಚಿಂಚೋಳಿ ಕೆರೆ ಅಂಗಳದಲ್ಲಿ ಬುದ್ಧ -ಬಸವ- ಅಂಬೇಡ್ಕರ್ ಜಯಂತಿ ಅಂಗವಾಗಿ ಶನಿವಾರ ‘ಬೆವರ ಬದುಕು’ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
‘ಕಾಯದಿಂದಲೇ ಕಾಯಕ, ಕಾಯಕದಿಂದಲೇ ಲೋಕ. ಕಾಯಕವು ಶ್ರಮವನ್ನು ಎತ್ತಿ ಹಿಡಿಯುತ್ತದೆ. ಪುರೋಹಿತಶಾಹಿಯು ಕಾಯಕವನ್ನು ಅಪಮಾನಿಸುತ್ತದೆ. ದೇವಸ್ಥಾನದ ಮುಂದಿನ ಸಾಲಿನಲ್ಲಿ ನಿಲ್ಲುವವರಿಗಿಂತ ಗ್ರಂಥಾಲಯದ ಮುಂದೆ ನಿಲ್ಲುವ ಮಹಿಳೆಯರ ಸಂಖ್ಯೆ ಹೆಚ್ಚಾದರೆ ಅದು ದೇಶದ ಅಭಿವೃದ್ಧಿಯ ಸಂಕೇತ ಎಂದು ಅಂಬೇಡ್ಕರ್ ಹೇಳಿದ್ದಾರೆ. ನಮ್ಮದು ದೇವಾಲಯ ಸಂಸ್ಕ್ರತಿಯಲ್ಲ; ಕಾಯಕ ಪರಂಪರೆಯ ಸಂಸ್ಕೃತಿ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇ’ ಎಂದು ತಿಳಿಸಿದರು.
‘ಬೆವರ ಬದುಕು’ ಪುಸ್ತಕವು ಕಾಯಕ ಜೀವಿಗಳ ಯಶೋಗಾಥೆಯಾಗಿದೆ. ಬೆವರ ಲೋಕದ ಧ್ವನಿಗಳ ಬದುಕು ತಿಳಿಯಲು ಈ ಪುಸ್ತಕ ಓದಲೆಬೇಕು’ ಎಂದು ನೀಲಾ ಕೆ. ಅವರು ಪುಸ್ತಕದ ಕುರಿತು ತಿಳಿಸಿದರು.
ಡಾ. ಮೀನಾಕ್ಷಿ ಬಾಳಿ, ಡಾ. ಪ್ರಭು ಖಾನಾಪುರೆ, ನಂದಾದೇವಿ ಮಂಗೊಂಡಿ, ನಿಂಗಪ್ಪ ಮಂಗೊಂಡಿ, ಕಲ್ಯಾಣಿ ತುಕ್ಕಾಣಿ, ಅಶ್ವಿನಿ ಮದನಕರ್, ಸಾವಿತ್ರಾ ಇದ್ದರು.
ಕವಿತಾ ಮಠಪತಿ ನಿರೂಪಿಸಿ, ಗುರುಬಾಯಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.