ಕಲಬುರ್ಗಿ: ಸಿಇಟಿ ಮೂಲಕ ಎಂಜಿನಿಯರಿಂಗ್ ಪ್ರವೇಶ ಪಡೆಯಬಯಸುವ ವಿದ್ಯಾರ್ಥಿಗಳಿಗೆ ಸೆ. 30ರಂದು ಕೌನ್ಸೆಲಿಂಗ್ ನಡೆಯಲಿದೆ. ಆದರೆ, ತಮ್ಮ ಜೆರಾಕ್ಸ್ ಪ್ರತಿಗಳ ಮೇಲೆ ಗೆಜೆಟೆಡ್ ಆಫೀಸರ್ಗಳ ದೃಢೀಕರಣ (ಅಟೆಸ್ಟೆಡ್) ಮಾಡಿಸಲು ಪರದಾಡುವಂತಾಗಿದೆ.
‘ಸೀಟು ಆಯ್ಕೆಗಾಗಿ ಮೊದಲ ಹಂತದ ಕೌನ್ಸೆಲಿಂಗ್ಗೆ ಹಾಜರಾಗಬೇಕಾದ ವಿದ್ಯಾರ್ಥಿಗಳು ತಮ್ಮ ಒರಿಜನಲ್ ಹಾಗೂ ಜೆರಾಕ್ಸ್ ಪ್ರತಿಗಳನ್ನು ಹಾಜರುಪಡಿಸಬೇಕು. ಜೆರಾಕ್ಸ್ ಪ್ರತಿಗಳ ಮೇಲೆ ದೃಢೀರಣ ಕಡ್ಡಾಯವಾಗಿ ಇರಬೇಕು. ಆದರೆ, ಸರ್ಕಾರಿ ಕಚೇರಿ, ಕಾಲೇಜು, ಆಸ್ಪತ್ರೆ ಸೇರಿದಂತೆ ಯಾವುದೇ ಗೆಜೆಡೆಟ್ ಅಧಿಕಾರಿಗಳು ಅಟೆಸ್ಟೆಡ್ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ತಮ್ಮ ದಾಖಲೆ ಹಿಡಿದುಕೊಂಡು ಕಚೇರಿಯಿಂದ ಕಚೇರಿಗೆ ಅಲೆಯಬೇಕಾಗಿದೆ’ ಎನ್ನುವುದು ವಿದ್ಯಾರ್ಥಿಗಳ ಅಳಲು.
‘ಸಹಿ ಮಾಡಿಸುವುದಕ್ಕೆ ಹೋದರೆ ‘ನೀವು ನನಗೆ ಕನಿಷ್ಠ ಆರು ವರ್ಷಗಳಿಂದ ಪರಿಚಯ ಇದ್ದರೆ ಮಾತ್ರ ಮಾಡುತ್ತೇನೆ, ಇಲ್ಲದಿದ್ದರೆ ಇಲ್ಲ. ಮುಂದೆ ಏನಾದರೂ ಕಷ್ಟವಾದರೆ ನಾನೇಕೆ ಹೊಣೆ ಆಗಬೇಕು’ ಎಂದು ಕೆಲವು ಅಧಿಕಾರಿಗಳು ಕೇಳುತ್ತಿದ್ದಾರೆ. ಆದರೆ, ಯಾವ ವಿದ್ಯಾರ್ಥಿಯೂ ಯಾರಿಗೂ ಆರು ವರ್ಷಗಳಿಂದ ಪರಿಚಯ ಇರಲು ಸಾಧ್ಯವಿಲ್ಲ. ನಾವು ಮೂಲ ದಾಖಲೆಗಳನ್ನು ಅವರ ಮುಂದೆ ಇಟ್ಟರೂ ಅಟೆಸ್ಟ್ ಮಾಡುವುದಕ್ಕೆ ನಿರಾಕರಿಸುತ್ತಾರೆ’ ಎಂದೂ ಕೆಲವರು ದೂರಿದ್ದಾರೆ.
‘ಕೆಲವು ಸರ್ಕಾರಿ ಅಧಿಕಾರಿಗಳು ಹಾಗೂ ಪ್ರಾಂಶುಪಾಲರು ಒಂದೊಂದು ಸಹಿಗೆ ಇಂತಿಷ್ಟು ಹಣ ಕೊಡಬೇಕು. ಇಲ್ಲದಿದ್ದರೆ ನನ್ನ ಬಳಿ ಬರಬೇಡಿ ಎಂದು ನೇರವಾಗಿ ಹೇಳುತ್ತಾರೆ. ಹೀಗಾದರೆ ವಿದ್ಯಾರ್ಥಿಗಳ ಭವಿಷ್ಯದ ಕತೆ ಏನು? ಕೇವಲ ಎರಡೇ ದಿನಗಳಲ್ಲಿ ನಾನು ಕೌನ್ಸೆಲಿಂಗ್ಗೆ ಹಾಜರಾಗಬೇಕು. ಇನ್ನೂ ದಾಖಲೆಗಳು ಸಿದ್ಧಗೊಂಡಿಲ್ಲ. ಈ ನೋವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗುತ್ತಿಲ್ಲ’ ಎಂದು ಪಟ್ಟಣದ ಹರ್ಷಿಣಿ ದುಃಖಿಸಿದರು.
‘ಒಂದು ವಾರದಿಂದ ವಿವಿಧ ಕಚೇರಿ, ಕಾಲೇಜುಗಳಿಗೆ ಅಲೆಯುತ್ತಿದ್ದೇವೆ. ಆದರೂ ಯಾರೂ ದಾಖಲೆಗಳನ್ನು ದೃಢೀಕರಿಸಲು ಸಿದ್ಧರಿಲ್ಲ. ಏಕೆ ಹೀಗೆ ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಹೀಗಾದರೆ ನಮ್ಮ ಅರ್ಹತೆ ಸೀಟುಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಕನಿಷ್ಠ ಸೌಜನ್ಯವೂ ಅಧಿಕಾರಿಗಳಿಗೆ ಇಲ್ಲ. ಮೇಲಧಿಕಾರಿಗಳು ತಕ್ಷಣ ಕ್ರಮ ಜರುಗಿಸಿ ಸಮಸ್ಯೆ ಬಗೆಹರಿಸಬೇಕು’ ಎಂದೂ ವಿದ್ಯಾರ್ಥಿಗಳಾದ ಪ್ರತೀಕ್, ಪ್ರಸನ್ನಕುಮಾರ್, ಜಗನ್ರಾಜ್, ಹೃತ್ವಿಕ್ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.