ADVERTISEMENT

ಯರಗೋಳ | ಮಧ್ವ ಮತದ ಚೈತನ್ಯ ಜ್ಯೋತಿ ಜಯತೀರ್ಥರು

ಇಂದಿನಿಂದ ಮೂರು ದಿನ ಜಯತೀರ್ಥರ ಆರಾಧನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 6:00 IST
Last Updated 24 ಜುಲೈ 2024, 6:00 IST
<div class="paragraphs"><p>ಯರಗೋಳ ಗ್ರಾಮದ ಗುಹೆಯಲ್ಲಿ ಜಯತೀರ್ಥರು ಮಧ್ವಾಚಾರ್ಯರ ಗ್ರಂಥಗಳಿಗೆ ವ್ಯಾಖ್ಯಾನಿಸಿದ ಸ್ಥಳ</p></div><div class="paragraphs"></div><div class="paragraphs"><p><br></p></div>

ಯರಗೋಳ ಗ್ರಾಮದ ಗುಹೆಯಲ್ಲಿ ಜಯತೀರ್ಥರು ಮಧ್ವಾಚಾರ್ಯರ ಗ್ರಂಥಗಳಿಗೆ ವ್ಯಾಖ್ಯಾನಿಸಿದ ಸ್ಥಳ


   

ಯರಗೋಳ: ಯರಗೋಳ ಗ್ರಾಮ ಸೇರಿ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡದ ಜಯತೀರ್ಥರ ಮೂಲ ಬೃಂದಾವನ ಸನ್ನಿಧಾನದಲ್ಲಿ ಜುಲೈ 24ರಿಂದ 26ರವರೆಗೆ ಉತ್ತರಾದಿ ಮಠದ ಸತ್ಯಾತ್ಮತೀರ್ಥರ ನೇತೃತ್ವದಲ್ಲಿ ಜಯತೀರ್ಥರ ಆರಾಧನಾ ಮಹೋತ್ಸವ ನಡೆಯಲಿದೆ.

ADVERTISEMENT

ನಿತ್ಯವೂ ಪೂಜೆ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಕಲಾವಿದರಿಂದ ದಾಸವಾಣಿ, ಪಂಡಿತರ ಉಪನ್ಯಾಸ, ಶ್ರೀಪಾದಂಗಳವರ ಅನುಗ್ರಹ ಸಂದೇಶ ನೀಡಲಿದ್ದಾರೆ.

ಜಯತೀರ್ಥರ ಪರಿಚಯ: 13ನೇ ಶತಮಾನದಲ್ಲಿ ಮಹಾರಾಷ್ಟ್ರದ ಪಂಢರಾಪುರ ಮಂಗಳವೇಡೆ ಗ್ರಾಮದಲ್ಲಿ ಜನಿಸಿದ ಜಯತೀರ್ಥರ ಬಾಲ್ಯದ ಹೆಸರು ದಂಡೋಪಂತರು. ಅವರು ಧಾರ್ಮಿಕ ಜೀವನದೆಡೆಗೆ ಮನಸ್ಸು ಮಾಡಿದ್ದನ್ನು ಕಂಡ ಹೆತ್ತವರು ಚಿಂತಿಸಿ, ಕನ್ಯೆಯನ್ನು ನೋಡಿ ಮದುವೆ ಮಾಡಿದರು. ಇದ್ಯಾವುದರ ವ್ಯಾಮೋಹ ಇರದ ಜಯತೀರ್ಥರು ಧಾರ್ಮಿಕ ಸೆಳೆತಕ್ಕೆ ಒಳಗಾಗಿ, ಸಂಸಾರಿಕ ಜೀವನ ತ್ಯಜಿಸಿ, ಧಾರ್ಮಿಕ ಜೀವನದ ಕಡೆಗೆ ವಾಲಿದರು.

ಲೋಕೋದ್ಧಾರಕ್ಕಾಗಿ ಬಂದ ಮಗನನ್ನು ಸಂಸಾರಕ್ಕೆ ಇಳಿಸುವುದು ಅಪರಾಧವೆಂದು ಭಾವಿಸಿದ ತಂದೆ- ತಾಯಿ ಮಗನಿಗೆ 21ನೇ ವಯಸ್ಸಿನಲ್ಲಿ ಗುರು ಅಕ್ಷೋಭ್ಯತೀರ್ಥರಿಗೆ ಒಪ್ಪಿಸಿದರು.

ಗುರುಗಳ ಮಾರ್ಗದರ್ಶನದಂತೆ ಮಹಾರಾಷ್ಟ್ರದ ಸಂಧ್ಯಾವಳಿ ಎನ್ನುವ ಗ್ರಾಮದಲ್ಲಿ ದೀರ್ಘ ತಪಸ್ಸು ಮಾಡುವಾಗ ದುರ್ಗಾದೇವಿ ಪ್ರತ್ಯಕ್ಷಳಾದಳು. ಆಗ ಜಯತೀರ್ಥರು ದೇವಿಯ ಹತ್ತಿರ ಮದ್ವರ ಗ್ರಂಥಗಳಿಗೆ ವ್ಯಾಖ್ಯಾನ ಮಾಡಲು ಲೇಖನಿ ಮತ್ತು ಸಾಧನವನ್ನು ಯಾಚಿಸಿದಾಗ ದೇವಿಯು ಶಿಷ್ಯನ ಭಕ್ತಿಗೆ ಅನುಗ್ರಹಿಸಿದಳು.

ತಮ್ಮ ಜೀವನದ ಪ್ರಧಾನ ಕಾರ್ಯಕ್ಕಾಗಿ ಯರಗೋಳ ಗ್ರಾಮಕ್ಕೆ ಆಗಮಿಸಿದ್ದರು. ಇಲ್ಲಿನ ಗುಹೆಯಲ್ಲಿ 13 ವರ್ಷ ಸುದೀರ್ಘ ಅಧ್ಯಯನ ಮಾಡಿದರು. ಶಿಷ್ಯರು ತಂದ ಜೋಳದ ನುಚ್ಚನ್ನು ದೇವರಿಗೆ ನೈವೇದ್ಯ ಅರ್ಪಿಸಿ ಪ್ರಸಾದವಾಗಿ ಸ್ವೀಕರಿಸಿದರು.

ಮೂಲ ದೇವರ ಪೂಜೆ ನೆರವೇರಿಸಿ ಶ್ರೀ ಮದ್ವರ 18 ಗ್ರಂಥಗಳಿಗೆ ವ್ಯಾಖ್ಯಾನ, 3 ಸ್ವತಂತ್ರ ಗ್ರಂಥಗಳನ್ನು ರಚಿಸಿದರು. ಮಧ್ವಮತದ ಚೈತನ್ಯ ಜ್ಯೋತಿಯಾಗಿ ಬೆಳಗಿದರು. ಮಧ್ವರ ಗ್ರಂಥಗಳಿಗೆ ಟೀಕೆಗಳನ್ನು ಮಾಡಿ ಟೀಕಾ ಗುರುಪಾದರಾದರು ಎಂದು ಹಿನ್ನೆಲೆ ಇದೆ. ಪ್ರತಿ ವರ್ಷ ಆಷಾಢ ಮಾಸದಲ್ಲಿ ಯರಗೋಳ ಗ್ರಾಮದಲ್ಲಿ ಪೂರ್ವಾರಾಧನೆ, ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದ ಜಯತೀರ್ಥರ ಮೂಲ ಬೃಂದಾವನದಲ್ಲಿ ಮಧ್ಯಾರಾಧನೆ ಮತ್ತು ಉತ್ತರಾರಾಧನೆ ಜರುಗಲಿದೆ. ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ಟೀಕಾರಾಯರ ದರ್ಶನ ಪಡೆದು ಪುನೀತರಾಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.