ADVERTISEMENT

ಚಿಂಚೋಳಿ: ಮಳೆಗೆ ತುಂಬಿದ 5 ಸಣ್ಣ ನೀರಾವರಿ ಕೆರೆಗಳು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 8:35 IST
Last Updated 14 ಆಗಸ್ಟ್ 2020, 8:35 IST
ಚಿಂಚೋಳಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಿಂದ ದೋಟಿಕೊಳ ಸಣ್ಣ ನೀರಾವರಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿರುವುದು.
ಚಿಂಚೋಳಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಿಂದ ದೋಟಿಕೊಳ ಸಣ್ಣ ನೀರಾವರಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿರುವುದು.   

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನಲ್ಲಿ ಉತ್ತಮ ಮಳೆಯಿಂದ 5 ಸಣ್ಣ ನೀರಾವರಿ ಕೆರೆಗಳು ಭರ್ತಿಯಾಗಿವೆ. ಜತೆಗೆ 7 ಕೆರೆಗಳು ಭರ್ತಿಯತ್ತ ಸಾಗಿವೆ ಎಂದು ಸಣ್ಣ ನೀರಾವರಿ ಚಿಂಚೋಳಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶರಣಪ್ಪ ಕೇಶ್ವಾರ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ. ತಾಲ್ಲೂಕಿನ ಐನಾಪುರ (ಹಳೆ), ಐನಾಪುರ (ಹೊಸ), ಚಂದನಕೇರಾ, ಖಾನಾಪುರ, ದೋಟಿಕೊಳ ಕೆರೆಗಳು ತುಂಬಿದ್ದು ಹೆಚ್ಚುವರಿ ನೀರು ವೇಸ್ಟವೇಯರ್ ಮೂಲಕ ಹರಿದು ಹೋಗುತ್ತಿದೆ.

ಜತೆಗೆ ಹೂಡದಳ್ಳಿ, ನಾಗಾಈದಲಾಯಿ, ಕೊಳ್ಳೂರು, ಹುಲ್ಸಗೂಡ, ಮುಕರಂಬಾ ಹಾಗೂ ಹಸರಗುಂಡಗಿ, ತುಮಕುಂಟಾ ಕೆರೆಗಳು ಭರ್ತಿಯ ಅಂಚಿನಲ್ಲಿವೆ. ಚಿಕ್ಕಲಿಂದಗಳ್ಳಿ, ಧರ್ಮಾಸಾಗರ, ಅಂತಾವರಂ, ಕೋಡ್ಲಿ ಅಲ್ಲಾಪುರ ಕೆರೆಗಳಿಗೆ ಒಳ ಹರಿವು ಹೆಚ್ಚಾಗಿದೆ. ರಾಜ್ಯದ ಎರಡನೇ ಅತಿದೊಡ್ಡ ಸಣ್ಣ ನೀರಾವರಿ ಕೆರೆ ಹೆಗ್ಗಳಿಕೆ ಹೊಂದಿರುವ ಸಾಲೇಬೀರನಹಳ್ಳಿ ಕೆರೆಗೆ 6 ಮೀಟರ್ ನೀರು ಸಂಗ್ರಹವಾಗಿದೆ.

ಬೃಹತ್ ಮತ್ತು ಮಧ್ಯಮ ನೀರಾವರಿ ಯೋಜನೆಯ ಚಂದ್ರಂಪಳ್ಳಿ ಜಲಾಶಯಕ್ಕೆ 4 ವರ್ಷಗಳ ನಂತರ ಶೇ 47ರಷ್ಟು ಭರ್ತಿಯಾಗಿದೆ. ಜಲಾಶಯಕ್ಕೆ 171 ಕ್ಯುಸೆಕ್ ಒಳ ಹರಿವಿದೆ. ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯ ಜುಲೈ 15ರಂದು ಭರ್ತಿಯಾಗಿತ್ತು. ನಂತರ ಗೇಟು ಎತ್ತಿ‌ ನಿರಂತರ‌ನೀರು ನದಿಗೆ ಬಿಟ್ಟಿದ್ದರಿಂದ ಜಲಶಯದ ನೀರಿನ ಸಂಗ್ರಹಣೆ ಶೆ 75 ಉಳಿಸಿಕೊಳ್ಳಲಾಗಿದ್ದು ಶುಕ್ರವಾರ 691 ಕ್ಯುಸೆಕ್ ಒಳ ಹರಿವಿದ್ದು, 788 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ಮುಲ್ಲಾಮಾರಿ ನದಿಯಲ್ಲಿ ಪ್ರವಾಹ ಉಂಟಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.