ವಾಡಿ (ಕಲಬುರ್ಗಿ): ಚಿತ್ತಾಪುರ ಕ್ಷೇತ್ರದ ಮಾಜಿ ಶಾಸಕ ವಾಲ್ಮೀಕ್ ನಾಯಕ (75) ತೀವ್ರ ಹೃದಯಾಘಾತದಿಂದ ಶುಕ್ರವಾರ ಬೆಳಿಗ್ಗೆ ನಿಧನರಾದರು.
ಬೆಂಗಳೂರಿನಿಂದ ರೈಲಿನಲ್ಲಿ ವಾಪಸ್ಸಾಗುತ್ತಿದ್ದಾಗ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಅವರನ್ನು ಕಲಬುರ್ಗಿ ಜಿಮ್ಸ್ಗೆ ಕರೆದೊಯ್ಯಲಾಗಿತ್ತು.
2009ರಲ್ಲಿ ಚಿತ್ತಾಪುರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಇವರು ಬಿಜೆಪಿಯಿಂದ ಜಯಗಳಿಸಿದ್ದರು. ಇದಕ್ಕೂ ಮುನ್ನ 1999ರಲ್ಲಿ ಶಹಾಬಾದ್ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ, ಬಾಬುರಾವ್ ಚವ್ಹಾಣ ವಿರುದ್ಧ ಪರಾಭವಗೊಂಡಿದ್ದರು. ಚಿತ್ತಾಪುರ ಕ್ಷೇತ್ರದಿಂದ 2008ರಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಖರ್ಗೆ ಅವರು ಲೋಕಸಭೆಗೆ ಹೋಗಿದ್ದರಿಂದ ಉಪ ಚುನಾವಣೆ ನಡೆದಿತ್ತು. ಆಗ, ನಡೆದ ಉಪ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸಿ ವಾಲ್ಮೀಕ್ ಆಯ್ಕೆಯಾಗಿದ್ದರು. ಆ ನಂತರದ ಎರಡು ಚುನಾವಣೆಯಲ್ಲಿ ಸೋತಿದ್ದರು.
ಬಿಜೆಪಿಯಲ್ಲಿ ನಿಷ್ಠರಿಗೆ ಬೆಲೆ ಇಲ್ಲ. ತಮಗೆ ಯಾವುದೇ ಸ್ಥಾನಮಾನ ನೀಡುತ್ತಿಲ್ಲ ಎಂದು ಇತ್ತೀಚಿಗಷ್ಟೇ ಪತ್ರಿಕಾಗೋಷ್ಠಿ ನಡೆಸಿ ಅಲವತ್ತುಕೊಂಡಿದ್ದರು. ಇವರಿಗೆ ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.