ADVERTISEMENT

ಬೆಳೆ ಹಾನಿ ಜಂಟಿ ಸಮೀಕ್ಷೆ ನಡೆಸಿ

ವಿಸ್ತೃತ ವರದಿ ನೀಡಲು ತಹಶೀಲ್ದಾರ್‌ಗೆ ಸಂಸದ ಉಮೇಶ ಜಾಧವ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 4:11 IST
Last Updated 17 ಜುಲೈ 2020, 4:11 IST
ಚಿಂಚೋಳಿ ತಾಲ್ಲೂಕು ಕನಕಪುರ ಗ್ರಾಮಕ್ಕೆ ಗುರುವಾರ ಸಂಸದ ಡಾ.ಉಮೇಶ ಜಾಧವ, ತಾ.ಪಂ. ಅಧ್ಯಕ್ಷರಾದ ರೇಣುಕಾ ಅಶೋಕ ಚವ್ಹಾಣ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರು
ಚಿಂಚೋಳಿ ತಾಲ್ಲೂಕು ಕನಕಪುರ ಗ್ರಾಮಕ್ಕೆ ಗುರುವಾರ ಸಂಸದ ಡಾ.ಉಮೇಶ ಜಾಧವ, ತಾ.ಪಂ. ಅಧ್ಯಕ್ಷರಾದ ರೇಣುಕಾ ಅಶೋಕ ಚವ್ಹಾಣ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರು   

ಚಿಂಚೋಳಿ: ನಾಗರಾಳ ಜಲಾಶಯದಿಂದ ಮುಲ್ಲಾಮಾರಿ ನದಿಗೆ ನೀರು ಬಿಟ್ಟಿರುವುದರಿಂದ ಪ್ರವಾಹ ಉಂಟಾಗಿದೆ. ಇದರಿಂದ ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿರುವ ಬಗ್ಗೆ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಬೇಕು ಎಂದು ಸಂಸದ ಡಾ. ಉಮೇಶ ಜಾಧವ ಸೂಚಿಸಿದರು.

ತಾಲ್ಲೂಕಿನ ಚಿಮ್ಮನಚೋಡ, ಕನಕಪುರ, ಚಿಂಚೋಳಿ ಸೇರಿದಂತೆ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ಅವರು ಜನರ ಅಹವಾಲು ಆಲಿಸಿದರು. ಮನೆಗಳಿಗೆ ನೀರು ನುಗ್ಗಿ ಅಗತ್ಯ ವಸ್ತುಗಳು ಹಾಳಾಗಿರುವುದನ್ನು ಖುದ್ದು ವೀಕ್ಷಿಸಿದರು.

ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಿದ್ದರಿಂದ ಸಂಪರ್ಕ ಕಡಿತವಾದ ಬಗ್ಗೆ ಮಾಹಿತಿ ಪಡೆದ ಅವರು ವಿಸ್ತೃತ ವರದಿ ನೀಡುವಂತೆ ತಮ್ಮೊಂದಿಗಿದ್ದ ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ಅವರಿಗೆ ಸೂಚಿಸಿದರು.

ADVERTISEMENT

ತಾಲ್ಲೂಕಿನಲ್ಲಿ ಕಳೆದ ವಾರ ಚಿಂಚೋಳಿ ಪಟ್ಟಣದ 43 ಮನೆಗಳಿಗೆ, ಗುರುವಾರ 89 ಮನೆಗಳು ಸೇರಿ ಒಟ್ಟು 128 ಮನೆಗಳಿಗೆ ನೀರು ನುಗ್ಗಿದೆ. 35 ಮನೆಗಳು ಮಳೆಯಿಂದ ಭಾಗಶಃ ಉರುಳಿವೆ ಎಂದು ಅರುಣಕುಮಾರ ಕುಲಕರ್ಣಿ ತಿಳಿಸಿದರು.

ಪ್ರವಾಹದಿಂದ 31 ಹಳ್ಳಿ ಮತ್ತು 30 ತಾಂಡಾಗಳಿಗೆ ವಿದ್ಯುತ್ ಪೂರೈಸಲು ತೊಂದರೆಯಾಗಿದೆ. ಇವುಗಳನ್ನು ಸರಿ ಪಡಿಸುವ ಕೆಲಸ ನಡೆದಿದೆ ಎಂದು ಜೆಸ್ಕಾಂ ಎಇಇ ಉಮೇಶ ಗೋಲಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾ.ಪಂ. ಅಧ್ಯಕ್ಷರಾದ ರೇಣುಕಾ ಅಶೋಕ ಚವ್ಹಾಣ, ಇಒ ಅನಿಲಕುಮಾರ ರಾಠೋಡ್, ಬಿಜೆಪಿ ಹಿರಿಯ ಮುಖಂಡ ಶರಣಪ್ಪ ತಳವಾರ, ಸತೀಶರೆಡ್ಡಿ, ಮಲ್ಲು ಕೂಡಾಂಬಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.