ಕಲಬುರಗಿ: ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಳಂದ ತಾಲ್ಲೂಕಿನಲ್ಲಿ ಆಗಸ್ಟ್ 9ರಿಂದ 15ರವರೆಗೆ ಪಾದಯಾತ್ರೆ ಹಾಗೂ ತಿರಂಗ ಯಾತ್ರೆ ನಡೆಸಲಾಗುವುದು’ ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ ತಿಳಿಸಿದರು.
‘ರಾಜ್ಯದ ಪ್ರತಿ ಬ್ಲಾಕ್ ಮಟ್ಟದಲ್ಲಿ 75 ಕಿ.ಮೀ. ಪಾದಯಾತ್ರೆ ಮಾಡುವಂತೆ ಕೆಪಿಸಿಸಿ ನಿರ್ದೇಶನ ನೀಡಿದೆ. ಹೀಗಾಗಿ, ತಾಲ್ಲೂಕಿನಲ್ಲಿ 7 ದಿನಗಳ ಕಾಲ ಪಾದಯಾತ್ರೆ ಮಾಡಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜನರಿಗೆ ತಿಳಿಸಲಾಗುವುದು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಮಹಾತ್ಮ ಗಾಂಧಿ ಅವರು ಬ್ರಿಟಿಷರಿಗೆ ಭಾರತ ಬಿಟ್ಟು ತೊಲಗಿ ಎಂದು ಅಂತಿಮ ಕರೆ ಕೊಟ್ಟ ಆಗಸ್ಟ್ 9ರ ದಿನದಂದೇ ಈ ಯಾತ್ರೆ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಮೊದಲ ದಿನ (ಆ.9) ಜಿಡಗಾದಿಂದ ಬೆಳಿಗ್ಗೆ 10ರಿಂದ ಆರಂಭವಾಗುವ ಯಾತ್ರೆ, ಮಾರ್ಗ ಮಧ್ಯ ಗ್ರಾಮ, ತಾಂಡಾಗಳನ್ನು ಹಾಯ್ದು ಪಟ್ಟಣ ಸೇರಲಿದೆ’ ಎಂದರು.
‘ಆಗಸ್ಟ್ 10ರಂದು ಖಜೂರಿ, 11 ತಡಕಲ್, 12 ಸಾವಳೇಶ್ವರ, 13 ಭೂಸನೂರ ಸಕ್ಕರೆ ಕಾರ್ಖಾನೆ ಹಾಗೂ 14 ಲಾಡಚಿಂಚೋಳಿ ಕ್ರಾಸ್ನಿಂದ ಆಳಂದ ಪಟ್ಟಣದವರೆಗೆ ಯಾತ್ರೆ ನಡೆಯಲಿದೆ. ಆ.15ರಂದು ಪಟ್ಟಣದ ಪ್ರಮುಖ ರಸ್ತೆ, ಬೀದಿಗಳಲ್ಲಿ 75 ಮೀಟರ್ ಉದ್ದದ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ಯಾತ್ರೆಯ ಯಶಸ್ಸಿಗೆ ಹೆಚ್ಚಿನ ಸಂಖ್ಯೆಯಲ್ಲಿಕಾರ್ಯಕರ್ತರು ಪಾಲ್ಗೊಳ್ಳಬೇಕು’ ಎಂದು ಕೋರಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಮೋದಿ, ಮುಖಂಡ ಗಣೇಶ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.