
ಕಾಳಗಿ: ‘ವಿವಿಧ ಜಾತಿ, ಧರ್ಮ, ಭಾಷೆ, ದೇವರು ಒಳಗೊಂಡ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಮೇಲೆ ಅಸ್ಪೃಶ್ಯತೆ ಹೋಗಲಾಡಿಸಿ ಸಮಾನತೆ ತರಬೇಕು. ಜನತೆಗೆ ಸುಗಮ ಆಡಳಿತ ಸಿಗಬೇಕು ಎಂಬ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಶ್ರೇಷ್ಠವಾದ ಸಂವಿಧಾನವನ್ನು ರಚಿಸಿ ವಿವಿಧತೆಯಲ್ಲಿ ಏಕತೆ ಇರುವುದನ್ನು ಗೊತ್ತು ಪಡಿಸಿದ್ದಾರೆ’ ಎಂದು ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಹೇಳಿದರು.
ತಾಲ್ಲೂಕು ಆಡಳಿತ ಸೋಮವಾರ ಆಯೋಜಿಸಿದ 77ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರಿಂದಲೇ ನಾವಿಂದು ಪ್ರಜಾಪ್ರಭುತ್ವದ ಅವಕಾಶಗಳನ್ನು ಪಡೆದಿದ್ದೇವೆ. ನಮಗೆ ಎಲ್ಲದಕ್ಕೂ ಸಂವಿಧಾನವೇ ತಳಪಾಯವಾಗಿದೆ, ನಮಗೆ ಪಕ್ಷಕ್ಕಿಂತ ದೇಶ ಹಾಗೂ ಸಂವಿಧಾನವೇ ಮೊದಲು’ ಎಂದರು.
ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಪೃಥ್ವಿರಾಜ ಪಾಟೀಲ ಸ್ವಾಗತಿಸಿ, ಮಾತನಾಡಿದರು. ತಾ.ಪಂ ಇಒ ಬಸಲಿಂಗಪ್ಪ ಡಿಗ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಸುಭಾಷ ಶೀಲವಂತ ಉಪನ್ಯಾಸ ನೀಡಿದರು. ಇದಕ್ಕೂ ಮುಂಚೆ ಮಹಾತ್ಮಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸೂಚಿಸಲಾಯಿತು.
ಸಿಪಿಐ ಜಗದೇವಪ್ಪ ಪಾಳಾ, ಪ.ಪಂ ಮುಖ್ಯಾಧಿಕಾರಿ ಪಂಕಜಾ ಎ., ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ಲೋಕೋಪಯೋಗಿ ಇಲಾಖೆ ಎಇಇ ಪ್ರಜ್ಞಾಶೀಲ ಗಂಜಗಿರಿ, ಜೆಸ್ಕಾಂ ಎಇಇ ಮಹ್ಮದ ಇಲಿಯಾಸ್, ಪಿಎಸ್ಐ ತಿಮ್ಮಯ್ಯ ಬಿ.ಕೆ., ಕೃಷಿ ಅಧಿಕಾರಿ ರಾಹುಲ್, ಆಡಳಿತ ವೈದ್ಯಾಧಿಕಾರಿ ಡಾ.ಅಮರೇಶ ಎಂ.ಎಚ್., ಗ್ರೇಡ್-2 ತಹಶೀಲ್ದಾರ್ ರಾಜೇಶ್ವರಿ ಅನೇಕರು ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.