ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸ್ವಯಂ ಸೇವಾ ಘಟಕದ (ಎನ್ಎಸ್ಎಸ್)ದ ವತಿಯಿಂದ ಹಮ್ಮಿಕೊಳ್ಳಲಾದ ಕೊರೊನಾ ಜಾಗೃತಿ ಅಭಿಯಾನಕ್ಕೆ ಕುಲಪತಿ ಪ್ರೊ. ದಯಾನಂದ ಅಗಸರ ಸೋಮವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕೋವಿಡ್–19 ಸೋಂಕು ವಿಶ್ವದಾದ್ಯಂತ ಹರಡಿ ಲಕ್ಷಾಂತರ ಜನರು ಜೀವ ಕಳೆದುಕೊಳ್ಳುತಿದ್ದಾರೆ. ಇದಕ್ಕೆ ಕಾರಣ ರೋಗ ಹರಡುವಿಕೆಯ ಬಗ್ಗೆ ಮತ್ತು ವಿಶ್ವಸಂಸ್ಥೆ ವಿಧಿಸಿರುವ ನಿಯಮಗಳನ್ನು ಪಾಲಿಸದೇ ಇರುವದು. ರೋಗವು ಅತ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ ಕರ್ನಾಟಕ ಸರ್ಕಾರದ ಆದೇಶದಂತೆ ಗುಲಬರ್ಗಾ ವಿಶ್ವವಿದ್ಯಾಲಯದ ಎನ್ಎಸ್ಎಸ್ ಕೋಶವು ಕಲಬುರ್ಗಿ ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ವಾಹನದ ಮುಖಾಂತರ ತೆರಳಿ ವೈರಸ್ ಸೋಂಕು ತಡೆಯಲು ಮಾಸ್ಕ್,ಕೈ ತೊಳೆಯುವುದು ಹಾಗೂ ದೈಹಿಕ ಅಂತರವನ್ನು ಪಾಲನೆ ಮಾಡುವ ಕ್ರಮಗಳ ಕುರಿತು ಜನರಲ್ಲಿ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಲಾಗುತ್ತದೆ’ ಎಂದರು.
ಕೋವಿಡ್–19 ನಿಯಮಗಳನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಕಡ್ಡಾಯವಾಗಿ ಪಾಲಿಸಬೇಕು ಎಂದರಲ್ಲದೇ, ವಿಶ್ವವಿದ್ಯಾಲಯದ ಸಿಬ್ಬಂದಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.
ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ, ವಿತ್ತಾಧಿಕಾರಿ ಪ್ರೊ. ಬಿ. ವಿಜಯ, ಎನ್ಎಸ್ಎಸ್ ಸಂಯೋಜಕ ಪ್ರೊ. ರಮೇಶ ಲಂಡನಕರ್ ಹಾಗೂ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.