
ಚಿಂಚೋಳಿ: ಕೋವಿಡ್-19 ರೂಪಾಂತರ ತಳಿ ಜೆಎನ್-1 ರಾಜ್ಯದಲ್ಲಿ ಪತ್ತೆಯಾದ ಕಾರಣ ತಾಲ್ಲೂಕಿನಲ್ಲಿ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳ ಪೂರ್ವ ಸಿದ್ಧತಾ ಸಭೆ ಮಂಗಳವಾರ ನಡೆಯಿತು.
ಇಲ್ಲಿನ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅಧ್ಯಕ್ಷತೆ ನಡೆದ ಸಭೆಯಲ್ಲಿ ಕೋವಿಡ್-19 ಎದುರಿಸಲು ಅಗತ್ಯವಾದ ಆಕ್ಸಿಜನ್, ಐಸಿಯು ಬೆಡ್, ಕೋವಿಡ್ ಪರೀಕ್ಷೆ ಹಾಗೂ ಔಷಧಿಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹಮದ್ ಗಫಾರ್ ತಿಳಿಸಿದರು.
ಸಭೆಯಲ್ಲಿ ತಹಶೀಲ್ದಾರ- ಸುಬ್ಬಣ್ಣ ಜಮಖಂಡಿ, ಗ್ರೇಡ್-2 ತಹಶೀಲ್ದಾರ್ ವೆಕಟೇಶ ದುಗ್ಗನ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಂಕರ ರಾಠೋಡ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಪ್ರಭುಲಿಂಗ ವಾಲಿ, ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೆಶಕ ಡಾ. ಧನರಾಜ ಬೊಮ್ಮಾ, ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಸರ್ಕಲ್ ಇನ್ಸ್ಪೆಕ್ಟರ್ ಅಂಬಾರಾಯ ಕಮಾನಮನಿ, ಡಾ. ಸಯ್ಯದ್ ಲತೀಫ್, ಆರೋಗ್ಯ ಇಲಾಖೆಯ ನೀಲಕಂಠ ಜಾಧವ, ಮಹೇಶ್ವರ, ಕಿರಣಕುಮಾರ, ನರೇಶ, ಸುಪ್ರಿಯಾ ಮೊದಲಾದವರು ಇದ್ದರು.
ಸಾರ್ವಜನಿಕರಿಗೆ ಸಲಹೆಗಳು: 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು, ಕಿಡ್ನಿ, ಲಿವರ್, ಹೃದಯ ಸಂಬಂಧಿ ಸಮಸ್ಯೆಯಿಂದ ಬಾಧಿತರಾದವರು ಮತ್ತು ಗರ್ಭಿಣಿಯರು, ಹಾಲುಣಿಸುವ ಬಾಣಂತಿಯರು, ಜನ ಸಂದಣಿ ಪ್ರದೇಶಗಳಿಗೆ ತೆರಳದಿರುವುದು. ಸೂಕ್ತ, ಕೆಮ್ಮು, ನೆಗಡಿ, ಜ್ವರ ಕಂಡು ಬಂದರೆ ಉಸಿರಾಟದ ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಸಲಹೆ ಪಡೆದುಕೊಳ್ಳಬೇಕು. ಕೋವಿಡ್ -19 ನಿಯಂತ್ರಣಕ್ಕಾಗಿ ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಆರ್ಟಿಪಿಸಿಆರ್ ಮತ್ತು ಆರ್ಎಟಿ ಪರೀಕ್ಷೆ ಮಾಡಲಾಗುವುದು. ರೋಗ ದೃಢಪಟ್ಟರೆ ಮತ್ತು ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡರೆ ಅವರಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಟಿಎಚ್ಒ ಡಾ. ಮಹಮದ್ ಗಫಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.