ಕಲಬುರ್ಗಿ: ಇಲ್ಲಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಆವರಣದಲ್ಲಿ ಮಂಗಳವಾರ ಭದ್ರತಾ ಸಿಬ್ಬಂದಿಯೊಬ್ಬರು ಮರದಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆಳಂದ ತಾಲ್ಲೂಕಿನ ಮಟಕಿ ಗ್ರಾಮದ ಬಸಣ್ಣ ಸಿದ್ರಾಮಪ್ಪ ಬಿರಾದಾರ (55) ಮೃತರು. ಹಲವು ವರ್ಷಗಳಿಂದ ಅವರು ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು. ಹಬ್ಬದ ದಿನವಾದರೂ ಅವರಿಗೆ ಸೋಮವಾರ ರಜೆ ಇರಲಿಲ್ಲ. ರಾತ್ರಿ ಭದ್ರತಾ ಕೆಲಸಕ್ಕೆ ಹಾಜರಾಗಿದ್ದ ಅವರು ಬೆಳಿಗ್ಗೆ 7ಕ್ಕೆ ತಮ್ಮ ಕೆಲಸದ ಸರದಿ ಮುಗಿಸಿದ್ದರು. ಆದರೆ, ಬೆಳಗಿನ ಶಿಫ್ಟ್ನಲ್ಲಿ ಕೆಲಸ ಮಾಡುವವರು ಬಾರದ ಕಾರಣ ಹೆಚ್ಚುವರಿ ಡ್ಯೂಟಿ ಮುಂದುವರಿಸಿದ್ದರು.
ಮರದಲ್ಲಿನ ಕೆಲ ಕೊಂಬೆಗಳು ಒಣಗಿದ್ದು ಅವುಗಳನ್ನು ಮುರಿಯಲು ಬೆಳಿಗ್ಗೆ ಮರ ಏರಿದ್ದರು. ಕೊಂಬೆ ಮುರಿಯುವ ವೇಳೆಯಲ್ಲೇ ಕಾಲುಜಾರಿ ಕೆಳಗೆ ಬಿದ್ದರು. ತಲೆ ಹಾಗೂ ಮುಖದ ಎಡಭಾಗಕ್ಕೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಯಿತು. ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ತಿಳಿಸಲಾಗಿದೆ.
ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.