ADVERTISEMENT

ಖೊಟ್ಟಿ ದಾಖಲೆ ಸೃಷ್ಟಿಸಿ ನಿವೇಶನ ಖರಿದಿ; ಮೂವರ ಬಂಧನ

ನಿವೇಶನ ಕಬಳಿಸುವ ಜಾಲ ಪತ್ತೆ; ಖಾಸಗಿ ಫೈನಾನ್ಸ್‌ ಸಂಸ್ಥೆಯಿಂದ ₹ 36 ಲಕ್ಷ ಸಾಲವನ್ನೂ ಪಡೆದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 5:22 IST
Last Updated 19 ಮಾರ್ಚ್ 2021, 5:22 IST
ಮಹ್ಮದ್ ಯೂಸೂಫ್‌ ಪಟೇಲ್‌
ಮಹ್ಮದ್ ಯೂಸೂಫ್‌ ಪಟೇಲ್‌   

ಕಲಬುರ್ಗಿ: ನಿವೇಶನಗಳ ಮೇಲೆ ಖೊಟ್ಟಿ ದಾಖಲೆ ಸೃಷ್ಟಿಸಿ, ₹ 36 ಲಕ್ಷ ಸಾಲ ಪಡೆದು ವಂಚನೆ ಮಾಡಿದ ಮೂವರನ್ನು ಸ್ಟೇಷನ್‌ ಬಜಾರ್‌ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತರಿಂದ ನಿವೇಶನದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮಕ್ಕಾ ಕಾಲೊನಿಯ ಮಹ್ಮದ್‌ ಯೂಸೂಫ್ ಮಹ್ಮದ್‌ ಖಾಜಾ ಪಟೇಲ್‌‌, ಕಾಳಗಿ ತಾಲ್ಲೂಕಿನ ಮಳಗಿ ಮೂಲದ ಇಲ್ಲಿನ ಓಂ ನಗರ ನಿವಾಸಿ ಚಂದ್ರಕಾಂತ ಗುಂಡಪ್ಪ ಕಟ್ಟಿಮನಿ ಹಾಗೂ ಮಹಿಬೂಬ್‌ ನಗರದ ಮಹ್ಮದ್‌ ಸದ್ರುದ್ದಿನ್‌ ಶೇಖ ವಲೀಯುದ್ದಿನ್‌ ಬಂಧಿತರು.

ಈ ಮೂವರೂ ಸೇರಿಕೊಂಡು ಬೇರೊಬ್ಬರ ಹೆಸರಿನಲ್ಲಿ ಇದ್ದ ಎರಡು ನಿವೇಶನಗಳನ್ನು ಖರೀದಿಸುವಂತೆ ಖೊಟ್ಟಿ ದಾಖಲೆ ಸೃಷ್ಟಿಸಿ, ಅವುಗಳನ್ನು ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದರು. ನಿವೇಶನ ಖರೀದಿಗಾಗಿಎಂ/ಎಸ್‌ ರೆಪ್ಕೊ ಹೋಮ್‌ ಫೈನಾನ್ಸ್‌ ಲಿಮಿಟೆಡ್‌ನಲ್ಲಿ ₹ 36 ಲಕ್ಷ ಸಾಲ ಕೂಡ ಪಡೆದಿದ್ದರು. ನಿವೇಶನದ ನಿಜವಾದ ಮಾಲೀಕರು ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಎನ್‌.ಸತೀಶಕುಮಾರ ತಿಳಿಸಿದ್ದಾರೆ.

ADVERTISEMENT

ಪ್ರಕರಣದ ವಿವರ:ಸೇಡಂ ತಾಲ್ಲೂಕಿನ ಇರನಾಪಲ್ಲಿ ಗ್ರಾಮದ ಯಲ್ಲಾರೆಡ್ಡಿ ಸಂಗಾರೆಡ್ಡಿ ಪಾಟೀಲ (80) ಹಾಗೂ ರಂಜೋಳ ಗ್ರಾಮದ ಸತ್ಯಕುಮಾರ ವೀರಾರೆಡ್ಡಿ ಪಾಟೀಲ ಅವರುಕಲಬುರ್ಗಿ ತಾಲ್ಲೂಕಿನ ಕುಸನುರ ಗ್ರಾಮದ (ಸರ್ವೆ ಸಂಖ್ಯೆ 42/ಎ)ಲ್ಲಿ ಚಂದ್ರಕಾಂತ ಶಿವಪುತ್ರಪ್ಪ ಘಂಟಿ ಹಾಗೂ ರಾಜಶೇಖರ ಶಿವಪುತ್ರಪ್ಪ ಘಂಟಿ ಅವರ ಹತ್ತಿರ 1999ರಲ್ಲಿ 40X60 ಚದರ್‌ ಅಡಿ ಅಳತೆಯ ಎರಡು ನಿವೇಶನ ಖರೀದಿಸಿದ್ದರು.ಇಬ್ಬರೂ ಒಟ್ಟಿಗೆ ನೋಂದಣಿ ಮಾಡಿಸಿಕೊಂಡು, ಕುಸನೂರ ಗ್ರಾಮ ಪಂಚಾಯಿತಿಯಲ್ಲಿ ಮುಟೇಷನ್‌ ಹಾಗೂ ಖಾತಾ ನೋಂದಣಿ ಮಾಡಿಸಿ ಕಂದಾಯ ಕಟ್ಟಿದ್ದಾರೆ. ಮುಂದೆ ಈ ನಿವೇಶನಗಳು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ್ದವು. ಆಗ ಮುಟೇಷನ್‌ ಕಾರ್ಯ ಸ್ಥಗಿತಗೊಳಿಸಿದ್ದರಿಂದ ನಿವೇಶನಗಳನ್ನು ಖಾಲಿ ಬಿಟ್ಟಿದ್ದಾಗಿ ಯಲ್ಲಾರೆಡ್ಡಿ ಪಾಟೀಲ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈಚೆಗೆ ಕಲಬುರ್ಗಿ ನೋಂದಣಿ ಕಚೇರಿಯಲ್ಲಿ ಹೋಗಿ ವಿಚಾರಿಸಿದಾಗ ತಮ್ಮ ನಿವೇಶನಗಳು, ನಗರದ ಛೋಟಾ ರೋಜಾ ಬಡಾವಣೆಯ ನಿವಾಸಿ ಮಹ್ಮದ್‌ ಸದ್ರುದ್ದೀನ್‌ ಶೇಖ್‌ ವಲೀಯುದ್ದೀನ್‌ ಅವರ ಹೆಸರಿನಲ್ಲಿ ನೋಂದಣಿಯಾಗಿದ್ದು ಗೊತ್ತಾಗಿದೆ. ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಎಂ/ಎಸ್‌ ರೆಪ್ಕೊ ಹೋಮ್‌ ಫೈನಾನ್ಸ್‌ ಲಿಮಿಟೆಡ್‌ ಎಂಬ ಹಣಕಾಸು ಸಂಸ್ಥೆಯಿಂದ ಒಂದು ಪ್ಲಾಟ್‌ ಖರೀದಿಗೆ ತಲಾ ₹ 18 ಲಕ್ಷದಂತೆ ಒಟ್ಟು ₹ 36 ಲಕ್ಷ ಸಾಲ ಪಡೆದು, ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಕೂಡ ಮಾಡಿಸಿಕೊಂಡಿದ್ದಾಗಿ ತಿಳಿದಿದೆ. ತಕ್ಷಣ ಈ ಬಗ್ಗೆ ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣದಲ್ಲಿ ಪಾಲ್ಗೊಂಡ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಮಕ್ಕಾ ಕಾಲೊನಿಯ ಮಹ್ಮದ್‌ ಯೂಸೂಫ್‌ ಮಹ್ಮದ್‌ ಖಾಜಾ ಪಟೇಲ್ ಉಪನೋಂದಣಾಧಿಕಾರಿ ಕಚೇರಿಯಲ್ಲಿ ದಲ್ಲಾಳಿ ಕೆಲಸ ಮಾಡುತ್ತಿದ್ದ. ತನ್ನ ಇಬ್ಬರು ಸಹಚರರಾದಸಾಗರ ಸುಂದರಕುಮಾರ ರೆಡ್ಡಿ ಹಾಗೂ ಚಂದ್ರಕಾಂತ ಗುಂಡಪ್ಪ ಕಟ್ಟಿಮನಿ ಎಂಬುವವರಿಗೆ ತಲಾ ₹ 1 ಲಕ್ಷ ಕೊಟ್ಟು ಅವರಿಂದ ಖೊಟ್ಟಿ ದಾಖಲೆಗಳ ಮೇಲೆ ಸಹಿ ಮಾಡಿಸಿ, ನಿವೇಶನ ಖರೀದಿದ್ದ.

ಮೂವರು ಸೇರಿಕೊಂಡು 2018ರ ಮೇ 28ರಂದು ನಿವೇಶನ ಖರೀದಿಸಲು ಎಂ/ಎಸ್‌ ರೆಪ್ಕೊ ಹೋಮ್‌ ಫೈನಾನ್ಸ್‌ ಲಿಮಿಟೆಡ್‌ನಲ್ಲಿ ಸಹಿ ಮಾಡಿ ₹ 36 ಲಕ್ಷ ಸಾಲ ಪಡೆದಿದ್ದರು. ಈ ಹಣವನ್ನು ಮಹ್ಮದ್‌ ಯೂಸೂಫನು ಚಂದ್ರಕಾಂತ ಹೆಸರಿನಲ್ಲಿ ತೆರೆದ ಅಕೌಂಟ್‌ಗೆ ಹಣ ಜಮೆ ಮಾಡಿಸಿ, ನಂತರ ಆತನಿಂದ ಪಡೆದಿದ್ದ. ಅದೇ ಹಣದಿಂದ ಬೇರೆ ನಿವೇಶನ ಖರೀದಿಸಿ, ಮನೆ ಕೂಡ ಕಟ್ಟಿಸುತ್ತಿದ್ದ ಎಂಬುದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ.

ಎಂ/ಎಸ್‌ ರೆಪ್ಕೊ ಹೋಮ್‌ ಫೈನಾನ್ಸ್‌ ಲಿಮಿಟೆಡ್‌ನವರು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೇ, ನವೇಶನಗಳ ಸ್ಥಳ ಪರಿಶೀಲಿಸಿದೇ ಸಾಲ ಮಂಜೂರು ಮಾಡಿದ್ದಾರೆ. ಇದರಿಂದ ಅವರು ಅಪರಾಧದಲ್ಲಿ ಭಾಗಿಯಾದಂತೆ ಆಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.