ಕಲಬುರಗಿ: ಎತ್ತುಗಳ ಕಳ್ಳತನ ಪ್ರಕರಣ ಭೇದಿಸಿರುವ ನರೋಣಾ ಠಾಣೆಯ ಪೊಲಿಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
‘ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಿದ್ದಾಪುರದ ದನದ ವ್ಯಾಪಾರಿ ಭಾಷಾ ಸುಲೇಮಾನಸಾಬ್ ಖಟಗುರ್ (28), ಬಳ್ಳಾರಿ ಜಿಲ್ಲೆಯ ಕೊಡಗಲ್ಲಿನ ದನಗಳ ವ್ಯಾಪಾರಿ ಭಾಷಾ ಹುಸೇನಸಾಬ್ ಸೈಯದ್ (29), ರಾಯಚೂರು ಜಿಲ್ಲೆಯ ಮಾನ್ವಿಯ ಗೌಂಡಿ ಮೊಹ್ಮದ್ ರಫಿಕ್ ಹುಸೇನಸಾಬ್ ಪಠಾಣ್ (28) ಬಂಧಿತರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಕಲಬುರಗಿ ಮತ್ತು ಬೀದರ್ ಜಿಲ್ಲೆಯ ಮೂರು ಪ್ರಕರಣಗಳಲ್ಲಿ ಎತ್ತುಗಳನ್ನು ಕಳವು ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ ₹ 85 ಸಾವಿರ ಮೌಲ್ಯದ ಎರಡು ಕಿಲಾರಿ ಎತ್ತುಗಳು, ₹ 5 ಲಕ್ಷ ಮೌಲ್ಯದ ಒಂದು ವಾಹನ ಮತ್ತು ₹ 20 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಪೊಲೀಸರು ರಾತ್ರಿ ಗಸ್ತು ತಪಾಸಣೆ ಕರ್ತವ್ಯದಲ್ಲಿದ್ದಾಗ ಬಾಳಿ ಕ್ರಾಸ್ ಬಳಿ ಈ ಮೂವರೂ ನಂಬರ್ ಪ್ಲೇಟ್ ಇಲ್ಲದ ಗೂಡ್ಸ್ ವಾಹನದಲ್ಲಿ ಸಂಚರಿಸುತ್ತಿದ್ದರು. ವಿಚಾರಣೆ ನಡೆಸಿದಾಗ, ಕಳವು ಪ್ರಕರಣ ಬೆಳಕಿಗೆ ಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.