ಕಲಬುರಗಿ: ಚಿತ್ರದುರ್ಗದ ಮುರುಘಾ ಮಠದ ವಸತಿ ನಿಲಯದ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ ನಡೆಸಿದ ಕುರಿತು ಮುರುಘಾ ಶರಣರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿ ಐದು ದಿನಗಳಾದರೂ ಬಂಧಿಸಿಲ್ಲ. ಕಾಯ್ದೆ ಪ್ರಕಾರ 24 ಗಂಟೆಗಳಲ್ಲೇ ಬಂಧಿಸಬೇಕಿದ್ದು, ಕೂಡಲೇ ಅವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಮುರುಘಾ ಶರಣರು ಮಾಡಿದ್ದಾರೆ ಎನ್ನಲಾದ ಕೃತ್ಯವು ಇಡೀ ನಾಗರಿಕ ಸಮಾಜ ನಾಚಿ, ತಲೆ ತಗ್ಗಿಸುವಂತಾಗಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಶರಣರನ್ನು ಬಂಧಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆಲದ ಕಾನೂನನ್ನು ಗೌರವಿಸಬೇಕು. ರಾಜ್ಯದ ಗೃಹಸಚಿವರು ರಾಜ್ಯದ ಪ್ರತಿ ಘಟನೆಯಲ್ಲಿಯೂ ಗಾಂಭೀರ್ಯವನ್ನು ಕಳೆದುಕೊಂಡವರಂತೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಾಯ್ದೆ ಪ್ರಕಾರ 24 ಗಂಟೆಯಲ್ಲಿ ಬಂಧಿಸಲೇಬೇಕು. ಆದರೆ, ರಾಜ್ಯ ಸರ್ಕಾರದ ಒತ್ತಡದಿಂದಾಗಿ ಪೊಲೀಸರು ಮುಂದುವರೆಯುತ್ತಿಲ್ಲ. ಆರೋಪಿಗಳನ್ನು ಬಂಧಿಸಬೇಕು ಹಾಗೂ ಸಂತ್ರಸ್ತ ಬಾಲಕಿಯರಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಸಂಘಟನೆಯ ರಾಜ್ಯ ಸಂಚಾಲಕ ಡಿ.ಜಿ. ಸಾಗರ್ ಒತ್ತಾಯಿಸಿದರು.
ಮುರುಘಾ ಶರಣರ ಬಂಧನ ಆಗದೇ ಇರುವುದನ್ನು ಖಂಡಿಸಿ ಹಲವು ಮುಖಂಡರು ಖಂಡಿಸಿ ಮಾತನಾಡಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ಸುರೇಶ ಹಾದಿಮನಿ, ಕೃಷ್ಣಪ್ಪ ಕರಣಿಕ, ಎಸ್.ಪಿ. ಸುಳ್ಳದ, ಎಚ್. ಶಂಕರ, ಅಂಬಣ್ಣ ಜೀವಣಗಿ, ಮಲ್ಲಣ್ಣ ಕೊಡಚಿ, ಎಸ್.ಎಂ. ಪಟ್ಟಣಕರ, ಶ್ಯಾಮರಾವ ಸಿಂಗೆ, ಅಲ್ಲಮಪ್ರಭು ನಿಂಬರ್ಗಾ, ಮಹಾದೇವ ತರನಳ್ಳಿ, ರವಿ ಬಡಿಗೇರ, ಮಹೇಂದ್ರ ಕೊಳ್ಳಿ, ಸುಭಾಷ್ ಡಾಂಗೆ, ಮಹಾಲಿಂಗ ಅಂಗಡಿ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.