ಚಿತ್ತಾಪುರ: ತಾಲ್ಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ದಂಡಗುಂಡ ಗ್ರಾಮದಲ್ಲಿರುವ ಬಸವಣ್ಣ ದೇವರ ಜಾತ್ರೆ ಪ್ರತಿ ವರ್ಷದ ಸಂಪ್ರದಾಯದಂತೆ ಶ್ರಾವಣ ಮಾಸದ ಮಧ್ಯದ ಸೋಮವಾರ ಪಲ್ಲಕ್ಕಿ ಉತ್ಸವ, ರಥೋತ್ಸವ ಅದ್ದೂರಿಯಾಗಿ ಜರುಗಲಿವೆ.
ಜಾತ್ರಾ ಮಹೋತ್ಸವ ನಿಮಿತ್ತ ಆ.18ರಂದು ಬೆಳಿಗ್ಗೆ ಬಸವಣ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆಯ ನಂತರ ಸಕಲ ಮಂಗಳ ವಾದ್ಯಮೇಳದೊಂದಿಗೆ ಗಂಗಾಸ್ಥಳ ಕಾರ್ಯಕ್ರಮ ಜರುಗಿದೆ. ಆ.19ರ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ನಂತರ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯುವುದು. ಸಂಜೆ 4 ಗಂಟೆಗೆ ರಥದ ಕಳಸ, ಕುಂಭದ ಮೆರವಣಿಗೆಯು ಗ್ರಾಮದಿಂದ ದೇವಸ್ಥಾನವರೆಗೆ ನಡೆಯಲಿದೆ.
ಸಂಜೆ 6 ಗಂಟೆಗೆ ರಥೋತ್ಸವ ನಡೆಯುವುದು. ಆ.20ರ ಬೆಳಿಗ್ಗೆ ಜಂಗಿ ಪೈಲ್ವಾನರ ಕೈಕುಸ್ತಿ ಪಂದ್ಯಗಳು ನಡೆಯಲಿವೆ ಎಂದು ದೇವಸ್ಥಾನ ಟ್ರಸ್ಟ್ ಸಮಿತಿ ತಿಳಿಸಿದೆ. ಜಾತ್ರೆಗೆ ಚಿತ್ತಾಪುರ, ಕಲಬುರಗಿ, ಜೇವರ್ಗಿ ಯಾದಗಿರಿ ಕೆಕೆಆರ್ಟಿಸಿ ಬಸ್ ಘಟಕಗಳಿಂದ ವಿಶೇಷ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.