ADVERTISEMENT

ಹಕ್ಕುಪತ್ರ ವಿತರಿಸಲು ಡಿಸಿಎಂ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 19:18 IST
Last Updated 9 ನವೆಂಬರ್ 2019, 19:18 IST

ಕಲಬುರ್ಗಿ: ನಗರದ ಉತ್ತರ ಮತಕ್ಷೇತ್ರದ ಗಂಗಾ ನಗರ ಕೊಳಚೆ ಪ್ರದೇಶದಲ್ಲಿನ 10 ಜನರಿಗೆ ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಿವೇಶನದ ಹಕ್ಕುಪತ್ರ ವಿತರಿಸುವಂತೆ ಸೂಚಿಸಿದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲದಿರುವುದನ್ನು ಗಮನಿಸಿದ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ ಹಾಗೂ ಯುವಮುಖಂಡ ಚಂದು ಪಾಟೀಲ ನೇತೃತ್ವದಲ್ಲಿ ನಿವಾಸಿಗಳು ಕಾರಜೋಳ ಅವರನ್ನು ಭೇಟಿ ಮಾಡಿದರು.

ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಪಟ್ಟಿ ತಯಾರಿಸಿ ಕೊಳಚೆ ಪ್ರದೇಶದ 10 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರಗಳನ್ನು ವಿತರಿಸಲಾಗಿತ್ತು. ಏಳೆಂಟು ವರ್ಷಗಳು ಕಳೆದರೂ ಇನ್ನುಳಿದವರಿಗೆ ಹಕ್ಕುಪತ್ರಗಳು ವಿತರಣೆಯಾಗಿಲ್ಲ. ಈ ಬಗ್ಗೆ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಕಲಬುರ್ಗಿ ಉಪವಿಭಾಗದ ಅಧಿಕಾರಿಗಳನ್ನು ಕೇಳಿದಾಗ, ಹಕ್ಕುಪತ್ರಗಳನ್ನು ರದ್ದುಪಡಿಸಲು ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ ಎಂಬುದನ್ನು ನಿವಾಸಿಗಳು ಕಾರಜೋಳ ಅವರ ಗಮನಕ್ಕೆ ತಂದರು.

ADVERTISEMENT

ಇದಕ್ಕೆ ಕೂಡಲೇ ಸ್ಪಂದಿಸಿ, ಕೂಡಲೇ ಹಕ್ಕುಪತ್ರಗಳನ್ನು ವಿತರಣೆ ಮಾಡಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಅಂಬು ಡಿಗ್ಗಿ, ಆಶೋಕ ಬಿದನೂರ, ಮಲ್ಲಿಕಾರ್ಜುನ ಕೂಡಿ, ಅನಿಲ್‌ ಕೂಡಿ, ವಿಶ್ವನಾಥ ಹಳ್ಳಿ, ನಟರಾಜ ಕಟ್ಟಿಮನಿ, ಶ್ರೀಕಾಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.