ಆಳಂದ: ಸಾಮಾಜಿಕ ಜಾಲತಾಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸುವ ಹಾಗೂ ನೀಲಿಶಾಲಿನ ಬಗ್ಗೆ ಅವಹೇಳನಕಾರಿ ಶಬ್ದಗಳಿಂದ ನಿಂದಿಸಿ ಪೋಸ್ಟ್ ಹಾಕಿದ ದಕ್ಷಿಣ ಕನ್ನಡದ ಪ್ರವೀಣ ಮುದ್ದಡಕಾ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಶುಕ್ರವಾರ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಯಿತು.
ಆಳಂದ ತಾಲ್ಲೂಕಿನ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಪೊಲೀಸ್ ಠಾಣೆಗೆ ತೆರಳಿ, ‘ಅಂಬೇಡ್ಕರ್ ಅವರನ್ನು ಅವಮಾನಿಸುವ ಘಟನೆಗಳು ನಿರಂತರವಾಗಿ ನಡೆಯತ್ತಿವೆ. ಇಂತಹ ಘಟನೆಗಳಿಗೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರನಾಯಕರ ವಿರುದ್ದ ಪೋಸ್ಟ್ ಮಾಡಿದ ಪ್ರವೀಣ ಮುದ್ದಡಕಾ ಅವರನ್ನು ಕೂಡಲೇ ಬಂಧಿಸಿ, ಗಡಿಪಾರು ಮಾಡಬೇಕು ಎಂದು ಮುಖಂಡ ಬಸವಲಿಂಗಪ್ಪ ಗಾಯಕವಾಡ , ಮಲ್ಲಿಕಾರ್ಜುನ ಬೋಳಣಿ ಒತ್ತಾಯಿಸಿದರು.
ದಲಿತಸೇನೆ ರಾಮವಿಲಾಸ ಪಾಸ್ವಾನ್ ಘಟಕದ ತಾಲ್ಲೂಕು ಅಧ್ಯಕ್ಷ ಧರ್ಮಾ ಬಂಗರಗಾ, ರಿಪಬ್ಲಿಕ್ ಯೂತ್ ಫೆಡರೇಷನ್ ಘಟಕದ ಅಧ್ಯಕ್ಷ ಪ್ರವೀಣ ಮೊದಲೆ, ರಾಜಕುಮಾರ ಮುದಗುಲೆ, ಸಿದ್ದಾರ್ಥ ಸಿಂಗೆ, ಮಂಜುನಾಥ, ಲಖನ್ ಶಿರೂರು, ದೀಪಕ ಮುದಗುಲೆ, ಕೆಂಚಣ್ಣ ಝಳಕಿ ಉಪಸ್ಥಿತರಿದ್ದರು. ಪಿಎಸ್ಐ ಕೋಡ್ಲಾ ಅವರಿಗೆ ದೂರು ಸಲ್ಲಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.