ಕಲಬುರ್ಗಿ: ‘ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ರೋಗಿಯ ಜೀವ ಉಳಿಸಲು ನೆರವಾಗಬೇಕು’ ಎಂದು ಮಹಾದೇವಪ್ಪ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಶರಣಬಸಪ್ಪ ಹರವಾಳ ಹೇಳಿದರು.
ಎಸ್ಬಿಆರ್ ಪಬ್ಲಿಕ್ ಶಾಲೆಯ ಅಲಮ್ನೈ ಕಚೇರಿಯಲ್ಲಿ ಎಸ್ಬಿಆರ್ ಸುವರ್ಣ ಮಹೋತ್ಸವ ಹಾಗೂ ಎಸ್ಬಿಆರ್ ಅಲಮ್ನೈ ಉತ್ಸವ ಅಂಗವಾಗಿ ಶನಿವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
‘ರಕ್ತಕ್ಕೆ ಬಹಳ ಬೇಡಿಕೆ ಇದೆ. ಆದರೆ, ಸರಿಯಾದ ಸಮಯಕ್ಕೆ, ಸರಿಯಾದ ಗುಂಪಿನ ರಕ್ತ ದೊರಕುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು’ ಎಂದರು.
ಎಸ್ಬಿಆರ್ ಅಲಮ್ನೈ ಉತ್ಸವ ಸಮಿತಿ ಅಧ್ಯಕ್ಷ ಡಾ.ಭರತ್ ಕೋಣಿನ್ ಮಾತನಾಡಿ, ‘ಸುವರ್ಣ ಮಹೋತ್ಸವಕ್ಕಾಗಿ ಒಂದು ವರ್ಷದಿಂದ ತಯಾರಿ ನಡೆದಿದೆ. ಆರು ತಿಂಗಳಿನಿಂದ ಬಹಳಷ್ಟು ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಗತಗೊಳಿಸಲಾಗುತ್ತಿದೆ. ನವೆಂಬರ್ 9ರಿಂದ 13ರ ವರೆಗೆ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು’ ಎಂದು ತಿಳಿಸಿದರು.
ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಶರಣಗೌಡ ಪಾಟೀಲ, ರಕ್ತ ಸಂಗ್ರಹಗಾರದ ಮುಖ್ಯಸ್ಥ ಡಾ. ಶರಣಬಸವಪ್ಪ ಶಿವಶೆಟ್ಟಿ, ಸಮಿತಿಯ ಉಪಾಧ್ಯಕ್ಷ ಬಸವರಾಜ ಖಂಡೇರಾವ್, ಡಾ.ಬಸವರಾಜ ಬಂಡಿ, ಕಾರ್ಯದರ್ಶಿ ಉದಯಶಂಕರ ನವಣಿ, ಜಂಟಿ ಕಾರ್ಯದರ್ಶಿ ದಿನೇಶ ಪಾಟೀಲ, ಸಿಬ್ಬಂದಿ ಪ್ರಸಾದ್ ಜಿ.ಕೆ. ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.