ಜೇವರ್ಗಿ: ‘ಬಿಜೆಪಿಯವರ ಸುಳ್ಳು ಭರವಸೆಗಳನ್ನು ನಂಬಿ ಮೋಸ ಹೋಗಬೇಡಿ. ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಅವರಿಗೆ ಮತನೀಡುವ ಮೂಲಕ ಕಾಂಗ್ರೆಸ್ ಪಕ್ಷದ ಸ್ವಾಭಿಮಾನ ಕಾಪಾಡಬೇಕು’ ಎಂದು ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಪಟ್ಟಣದ ಶಹಾಪೂರ ರಸ್ತೆಯ ಭೂತಪೂರ ಕಲ್ಯಾಣ ಮಂಟಪದಲ್ಲಿ ಶನಿವಾರ ವಿಧಾನಪರಿಷತ್ ಚುನಾವಣೆ ಅಂಗವಾಗಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು
ಮಾತನಾಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಸೋಲಾಗಿಲ್ಲ, ಡಾ.ಬಿ.ಆರ್.ಅಂಬೇಡ್ಕರ್, ಅಕ್ಷರದವ್ವ ಸಾವಿತ್ರಿಭಾ ಫುಲೆ ವಿಚಾರಧಾರೆಗಳಿಗೆ ಸೋಲಾಗಿದೆ. ನಾನು ಸೋತರೂ ನಂಬಿದ ತತ್ವ ಸಿದ್ಧಾಂತಗಳನ್ನು ಕಾಪಾಡಲು ಜೀವನುದ್ದಕ್ಕೂ ಹೋರಾಟ ನಡೆಸುತ್ತೇನೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿನ ಕಾರಣ ಕೇಳುವುದಿಲ್ಲ, ಆದರೆ ಪ್ರಸಕ್ತ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಅವರನ್ನು ಗೆಲ್ಲಿಸುವ
ಮೂಲಕ ಕಾಂಗ್ರೆಸ್ ಪಕ್ಷದ ಸ್ವಾಭಿಮಾನ ಕಾಪಾಡಬೇಕು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ
ಹೇಳಿದರು.
ಶಾಸಕ ಡಾ.ಅಜಯಸಿಂಗ್ ಮಾತನಾಡಿ, ವಿಧಾನಪರಿಷತ್ ಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನಡೆದಿಲ್ಲ. ಇಲ್ಲಿ ಹಣವಂತ ಹಾಗೂ ಗುಣವಂತರ ಮಧ್ಯೆ ಚುನಾವಣೆ ನಡೆಯುತ್ತಿದೆ. ಹಣದ ಆಮಿಷಕ್ಕೆ ಒಳಗಾಗದೇ ಗುಣವಂತ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಮಾತನಾಡಿದರು.
ಪ್ರಚಾರ ಸಭೆಯಲ್ಲಿ ಶಾಸಕರಾದ ಶರಣಬಸಪ್ಪ ದರ್ಶನಾಪೂರ, ಖನೀಜ್ ಫಾತೀಮಾ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಲಿಂಗರೆಡ್ಡಿ ಇಟಗಿ, ಮುಖಂಡರಾದ ಅಲ್ಲಮಪ್ರಭು ಪಾಟೀಲ, ನೀಲಕಂಠರಾವ ಮೂಲಗೆ, ಶರಣು ಮೋದಿ, ಯಡ್ರಾಮಿ ಬ್ಲಾಕ್ ಅಧ್ಯಕ್ಷ ರುಕುಂ ಪಟೇಲ ಇಜೇರಿ, ರಾಜಶೇಖರ ಸೀರಿ, ಕಾಶಿಂ ಪಟೇಲ ಮುದಬಾಳ, ಶಾಂತಪ್ಪ ಕೂಡಲಗಿ, ಬೈಲಪ್ಪ ನೇದಲಗಿ, ಶಾಂತಗೌಡ ಪಾಟೀಲ ದುಮ್ಮದ್ರಿ, ಗೊಲ್ಲಾಳಪ್ಪಗೌಡ ಮಾಗಣಗೇರಾ, ಗುರುರಾಜ ಸುಬೇದಾರ
ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.