ಕಲಬುರಗಿ: ದಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಇಂಡಿಯಾದ ಕಲಬುರಗಿ ಘಟಕದಿಂದ ನಗರದ ಎಸ್.ಬಿ.ಟೆಂಪಲ್ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಸಭಾಭವನದಲ್ಲಿ ಭಾನುವಾರ ಸಂಜೆ 6 ಗಂಟೆಗೆ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಹಾಗೂ ಎಂಜಿನಿಯರ್ಸ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ ಪಾಲ್ಗೊಳ್ಳುವರು. ಇತಿಹಾಸಕಾರರೂ ಆಗಿರುವ ಎಂಜಿನಿಯರ್ ಧರ್ಮೇಂದ್ರ ಅರೇನಹಳ್ಳಿ ಗೌರವ ಅತಿಥಿಯಾಗಿ ಪಾಲ್ಗೊಳ್ಳುವರು.
ಬೆಂಗಳೂರಿನ ಎರಿಕ್ಸನ್ ಕಂಪನಿ ಎಂಜಿನಿಯರ್ ಸುನೀಲಕುಮಾರ್ ಕುಲಕರ್ಣಿ ದಿಕ್ಸೂಚಿ ಭಾಷಣ ಮಾಡುವರು. ಈ ಸಭೆಯ ಅಧ್ಯಕ್ಷತೆಯನ್ನು ದಿ ಇನ್ಸ್ಟಿಟ್ಯೂಟ್ ಆಫ್ ಆಫ್ ಎಂಜಿನಿಯರ್ಸ್ನ ಅಧ್ಯಕ್ಷ ಶ್ರೀಧರ ಪಾಂಡೆ ವಹಿಸುವರು.
ಇದೇ ಕಾರ್ಯಕ್ರಮದಲ್ಲಿ ಕಲಬುರಗಿಯ ಎಂಜಿನಿಯರ್ಗಳಾದ ಗಿರಿಧರ ಕುಲಕರ್ಣಿ, ನಾಗೇಂದ್ರಪ್ಪ ಬಿರಾದಾರ, ವಿಟಿಯು ಕಲಬುರಗಿ ಪ್ರಾದೇಶಿಕ ನಿರ್ದೇಶಕ ಪ್ರೊ.ಬಸವರಾಜ ಗಾದಗೆ, ಉದ್ಯಮಿ ಸಂಪತ್ ಗಿಲಡಾ, ಕೆಎಎಸ್ ಅಧಿಕಾರಿಯೂ ಆಗಿರುವ ಎಂಜಿನಿಯರ್ ಶ್ರೀಯಾಂಕಾ ಧನಶ್ರೀ, ಎಂಜಿನಿಯರ್ ಅನಿಲಕುಮಾರ್ ಕಾಡಾದಿ, ಪ್ರೊ.ನಾಗೇಂದ್ರ ಎಚ್. ಅವರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮದ ನಂತರ ಪ್ರಶಾಂತ್ ಕಾಂಬಳೆ, ಎಂಜಿನಿಯರ್ ಚಂದ್ರಶೇಖರ ಸುಲೆಪೇಟಕರ್ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರೊ.ಸೀತಾರಾಮ ಮುನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.