ಕಲಬುರ್ಗಿ: ‘ಸಚಿವ ಅನಂತಕುಮಾರ ಹೆಗಡೆ, ಸಂಸದ ನಳೀನ್ ಕುಮಾರ್ ಕಟೀಲ್ ಹಾಗೂ ಲೋಕಸಭಾ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಗಾಂಧೀಜಿ ಬಗ್ಗೆ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ ಗಾಂಧೀಜಿ ಕೊಲೆಗೆ ಬಿಜೆಪಿ, ಆರ್ಎಸ್ಎಸ್ ಕುಮ್ಮಕ್ಕು ನೀಡಿದಂತಿದೆ’ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಆರೋಪಿಸಿದ್ದಾರೆ.
‘ನಾಥೂರಾಮ್ ಗೋಡ್ಸೆ ಬಗ್ಗೆ ಇವರು ನೀಡಿರುವ ಹೇಳಿಕೆಗಳನ್ನು ಗಮನಿಸಿದಾಗ ಬಿಜೆಪಿಗೆ ಗಾಂಧೀಜಿ ಬಗ್ಗೆ ಇರುವ ಅಗೌರವ ಬಹಿರಂಗವಾಗಿದೆ. ಬಿಜೆಪಿಗೆ ಯಾವತ್ತೂ ಗಾಂಧೀಜಿ ಮೇಲೆ ವಿಶ್ವಾಸವಿಲ್ಲ. ವಿಶೇಷವಾಗಿ ಸಂಘ ಪರಿವಾರದವರು ಗಾಂಧೀಜಿ ಅವರನ್ನು ಒಪ್ಪುವುದಿಲ್ಲ. ತನ್ನ ಆಸ್ತಿ, ಅಂತಸ್ತು ಬಿಟ್ಟು ಹಗಲಿರುಳು ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಸ್ವಾತಂತ್ರ್ಯ ದೊರಕಿಸಿಕೊಟ್ಟ ಗಾಂಧೀಜಿ ಅವರನ್ನು ಇಡೀ ದೇಶವೇ ರಾಷ್ಟ್ರಪಿತ ಎಂದು ಕರೆಯುತ್ತದೆ. ಆದರೆ, ಬಿಜೆಪಿಯವರು ಗಾಂಧೀಜಿ ಅವರನ್ನು ದೇಶದ್ರೋಹಿ ಎಂದು ಸಂಬೋಧಿಸಿ, ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಿರುವುದು’ ಖಂಡನೀಯ ಎಂದು ತಿಳಿಸಿದ್ದಾರೆ.
‘ದೇಶದಾದ್ಯಂತ ಬಿಜೆಪಿಯವರು ಗಾಂಧೀಜಿ ಅವರನ್ನು ಅವಹೇಳನ ಮಾಡುವುದನ್ನು ಕಂಡೂ ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೂ ತುಟಿ ಬಿಚ್ಚಿಲ್ಲ. ಅಂದರೆ, ಮೌನಂ ಸಮ್ಮತಿ ಲಕ್ಷಣವೇ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.