ಕಲಬುರ್ಗಿ: ‘ಬಸವಾದಿ ಶರಣರ ವಚನದ ಸಾಹಿತ್ಯದಲ್ಲಿ ಸಾಧನೆಯ ಶಕ್ತಿ ಅಡಗಿದೆ. ಅವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವಿಸಿದರೆ ನಮಗೆ ಗೊತ್ತಾಗದೇ ಬದುಕು ಉಜ್ವಲವಾಗುತ್ತದೆ’ ಎಂದು ಕಾಂಗ್ರೆಸ್ ಮುಖಂಡ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಶ್ರೀನಿವಾಸ ಸರಡಗಿಯ ಚಿನ್ನದಕಂತಿ ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠ, ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘ ಹಾಗೂ ಅಖಿಲ ಭಾರತ ಯುವಜನ ಒಕ್ಕೂಟ ಗ್ರಾಮ ಘಟಕದಿಂದ ಶುಕ್ರವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ನಿರ್ಭಯ ಸಾಧಕ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
‘ವಿದ್ಯಾರ್ಥಿಗಳು ಮುಂದೆ ಸಂಪತ್ತು ಹಾಗೂ ಸಂಬಂಧ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕಾದರೆ ಸಂಬಂಧವನ್ನೆ ಆಯ್ಕೆ ಮಾಡಿಕೊಳ್ಳಿ. ಏಕೆಂದರೆ ಸಂಪತ್ತನ್ನು ಮರಳಿ ಪಡೆಯಬಹುದು ಆದರೆ ಕಳೆದುಕೊಂಡ ಸಂಬಂಧ ಮರಳಿ ಸಿಗಲಾರದು. ತೋರಿಕೆಯ ಜೀವನ ನಡೆಸಬೇಡಿ ಅದು ನಿಮ್ಮ ವ್ಯಕ್ತಿತ್ವವನ್ನು ಕಡಿಮೆ ಮಾಡುತ್ತದೆ. ತೋರಿಕೆ ಇಲ್ಲದೆ ಸರಳತೆಯಿಂದ ಬದುಕಿ ತೋರಿಸಿ. ಆಗ ಪ್ರಪಂಚವೇ ನಿಮಗೆ ಕೊಂಡಾಡುತ್ತದೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ಮಠದ ಪೀಠಾಧಿಪತಿ ಡಾ.ರೇವಣಸಿದ್ಧ ಶಿವಾಚಾರ್ಯರು, ‘ಅನ್ನದಾನ ಮಾಡುವುದಕ್ಕಿಂತ ಅನ್ನಕ್ಕೆ ದಾರಿ ಮಾಡಿಕೊಡುವುದು ಶ್ರೇಷ್ಠ. ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದರೆ ಸಾಲದು. ಉತ್ತಮ ಸಂಸ್ಕಾರದೊಂದಿಗೆ ಬದುಕುವುದು ಕಲಿಯಬೇಕು’ ಎಂದು ಆಶೀರ್ವಚನ ನೀಡಿದರು.
ಸಂಘದ ಅಧ್ಯಕ್ಷ ಹಣಮಂತರಾಯ ಎಸ್. ಅಟ್ಟೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಖ್ಯಾತ ಉದ್ಯಮಿ ವಿನೋದಕುಮಾರ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರಾದ ಶಿವು ಸ್ವಾಮಿ ವೇದಿಕೆಯ ಮೇಲಿದ್ದರು.
ಎಸ್ಸೆಸ್ಸೆಲ್ಸಿ ಸಾಧಕರಾದ ವಿಶಾಲ ಗಂಗಾಣಿ, ಐಶ್ವರ್ಯ ಹಡಪದ, ಶ್ರವಣಕುಮಾರ ಕಮಕನೂರ, ಚನ್ನವೀರಕುಮಾರ ಗಂಗಾಣಿ, ಸ್ವಾತಿ ಹಿರೇಮಠ, ನಾಗೇಶ ಶ್ರೀಮನಿ, ಭಾಗ್ಯಶ್ರೀ ಕಂಠಿಕರ್, ಶಶಿಕಲಾ ವಗ್ಗೆ ಹಾಗೂ ಪಿಯುಸಿ ವಿದ್ಯಾರ್ಥಿಗಳಾದ ಪ್ರೇಮಾ ಗಂಗಾಣಿ, ಸ್ನೇಹಾ ಆಕಾರ, ಶಿವರಾಜ ಕುಮಾರ ಪೂಜಾರಿ, ಲಕ್ಷ್ಮೀ ರುದನೂರ, ಅಂಕುಶ ರುದನೂರ ಅವರಿಗೆ ‘ನಿರ್ಭಯ ಸಾಧಕ’' ಪ್ರಶಸ್ತಿ ನೀಡಲಾಯಿತು.
ಸಂತೋಷ ಆಡೆ ಸ್ವಾಗತಿಸಿದರು. ರವಿಕುಮಾರ ಶಹಾಪುರಕರ ನಿರೂಪಿಸಿದರು. ಎನ್.ಎಸ್. ಹಿರೇಮಠ ವಂದಿಸಿದರು.ಸಂಗಯ್ಯ ಹಿರೇಮಠ, ಆನಂದ ಆಡೆ, ಶರಣಗೌಡ ಪಾಟೀಲ, ರಘುನಂದನ ಕುಲಕರ್ಣಿ, ಕಲ್ಯಾಣರಾವ ಮುರುಡ, ಶಿವರುದ್ರ ಕರಿಕಲ, ಮಲಕಾರಿ ಪೂಜಾರಿ, ಭೀಮಾಶಂಕರ ಚಕ್ಕಿ, ಮಹಬೂಬ ಪಟೇಲ, ಲಿಂಗರಾಜ ಮಾಲಿಪಾಟೀಲ, ಶಾಂತಲಿಂಗ ಪಾಟೀಲ, ವಿರುಪಾಕ್ಷಯ್ಯ ಮಠಪತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.